SIR ಕುರಿತು CECಗೆ ಡಿ.ಕೆ.ಶಿವಕುಮಾರ್ ಪತ್ರ; ಪರಿಷ್ಕರಣೆ ಅವಧಿ ವಿಸ್ತರಣೆಗೆ ಮನವಿ
ಬೆಂಗಳೂರು: ಕರ್ನಾಟಕದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.
SIR ಪ್ರಕ್ರಿಯೆಯಲ್ಲಿ ಗಂಭೀರ ಕಳವಳಗಳಿದ್ದು, ASDDO ಅಡಿಯಲ್ಲಿ 1.08 ಕೋಟಿಗೂ ಹೆಚ್ಚು ಮತದಾರರನ್ನು ಗುರುತಿಸಲಾಗಿದೆ. ತಾರ್ಕಿಕ ವ್ಯತ್ಯಾಸಗಳ ಹಿನ್ನೆಲೆಯಲ್ಲಿ ಸುಮಾರು 43 ಲಕ್ಷ ಮತದಾರರಿಗೆ ನೋಟಿಸ್ ನೀಡಲಾಗಿರುವುದರಿಂದ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆ ಕುರಿತು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಕರಡು ಮತದಾರರ ಪಟ್ಟಿಯಿಂದ ಹೊರಗುಳಿದ ನೈಜ ಮತದಾರರಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸಾಕಷ್ಟು ಕಾಲಾವಕಾಶ ಕಲ್ಪಿಸುವಂತೆ ಪ್ರಕ್ರಿಯೆಯ ಅವಧಿಯನ್ನು ವಿಸ್ತರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮಸಭೆ ಹಾಗೂ ನಗರ ಪ್ರದೇಶಗಳಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಿಗದಿತ ಕಾರ್ಯವಿಧಾನದಂತೆ ನಡೆಸಲು ರಾಜ್ಯ ಮುಖ್ಯ ಚುನಾವಣಾಧಿಕಾರಿಗೆ ನಿರ್ದೇಶನ ನೀಡಬೇಕು. ಈ ಕುರಿತು ವ್ಯಾಪಕ ಪ್ರಚಾರ ಕೈಗೊಂಡು ಸಾರ್ವಜನಿಕರಿಗೆ ಮಾಹಿತಿ ತಲುಪಿಸಬೇಕು ಎಂದು ಶಿವಕುಮಾರ್ ಕೋರಿದ್ದಾರೆ.
ತಾರ್ಕಿಕ ವ್ಯತ್ಯಾಸಗಳು ಅಥವಾ 2002ರ ಮತದಾರರ ಪಟ್ಟಿಗೆ ಸಂಪರ್ಕ ಇಲ್ಲದಿರುವ ಕಾರಣ ನೋಟಿಸ್ ಪಡೆದವರಿಗೆ ಪ್ರತಿಕ್ರಿಯೆ ಮತ್ತು ಅಗತ್ಯ ದಾಖಲೆ ಸಲ್ಲಿಸಲು ಕನಿಷ್ಠ 3ರಿಂದ 4 ವಾರಗಳ ಕಾಲಾವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಹಕ್ಕು, ಆಕ್ಷೇಪಣೆ ಹಾಗೂ ಅರ್ಜಿಗಳ ಹೆಚ್ಚಳವನ್ನು ನಿರ್ವಹಿಸಲು ಚುನಾವಣಾ ನೋಂದಣಿ ಅಧಿಕಾರಿಗಳ (ERO) ಸಂಖ್ಯೆಯನ್ನು ಹೆಚ್ಚಿಸಬೇಕು. ಅಗತ್ಯವಿದ್ದರೆ ಜಿಲ್ಲಾ ಚುನಾವಣಾಧಿಕಾರಿಗಳ (DEO) ಸಂಖ್ಯೆಯನ್ನೂ ಹೆಚ್ಚಿಸಿ, ದೋಷಗಳು ಮತ್ತು ಅರ್ಹ ಮತದಾರರ ಅನ್ಯಾಯದ ಹೊರಗಿಡುವಿಕೆಯನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ.
SIR ಪ್ರಕ್ರಿಯೆ ಸುಗಮವಾಗಿ ನಡೆಯಲು ಗ್ರಾಮಸಭೆ ಮತ್ತು ವಾರ್ಡ್ ಸಮಿತಿ ಸಭೆಗಳಿಗೆ ಸ್ಥಳೀಯ ಆಡಳಿತವನ್ನು ಸಜ್ಜುಗೊಳಿಸುವುದು ಸೇರಿದಂತೆ ಚುನಾವಣಾ ಆಯೋಗಕ್ಕೆ ಅಗತ್ಯವಿರುವ ಎಲ್ಲ ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧವಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.