Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

NSG ಸಹಯೋಗದಲ್ಲಿ ಕರ್ನಾಟಕ ಪೊಲೀಸರಿಗೆ ವಿಶೇಷ ತರಬೇತಿ; ಪ್ರಿಯಾಂಕ್ ಖರ್ಗೆ

By ANU News
August 29, 2026 2 Min Read
0

ಬೆಂಗಳೂರು: ಬದಲಾಗುತ್ತಿರುವ ಅಪರಾಧ ಮತ್ತು ಭದ್ರತಾ ಸವಾಲುಗಳನ್ನು ಎದುರಿಸಲು ಕರ್ನಾಟಕ ಪೊಲೀಸ್ ಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಭದ್ರತಾ ಪಡೆ (NSG) ಸಹಯೋಗದಲ್ಲಿ ವಿಶೇಷ ತರಬೇತಿ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್‌ಗಾಗಿ ಆಯೋಜಿಸಿರುವ ‘ಸಮಗ್ರ ಸಾಮರ್ಥ್ಯ ವೃದ್ಧಿ ತರಬೇತಿ ಕಾರ್ಯಕ್ರಮ’ಕ್ಕೆ ಚಾಲನೆ ನೀಡಲಾಯಿತು ಎಂದು ಅವರು ಹೇಳಿದ್ದಾರೆ.

ದೇಶದ ಆಂತರಿಕ ಭದ್ರತೆಗೆ ಸರ್ವಸನ್ನದ್ಧವಾಗಿರುವ ವಿಶೇಷ ಪಡೆಯ ಅಗತ್ಯವನ್ನು ಮನಗಂಡು 1984ರಲ್ಲಿ NSG ಸ್ಥಾಪಿಸಲಾಗಿದ್ದು, 1986ರಲ್ಲಿ ಇದಕ್ಕಾಗಿ ಪ್ರತ್ಯೇಕ ಕಾಯ್ದೆ ರೂಪಿಸಲಾಯಿತು. ವಿಶೇಷ ತರಬೇತಿ ಹಾಗೂ ಸಾಮರ್ಥ್ಯ ಹೊಂದಿರುವ NSG ಪಡೆಯ ಅನುಭವವನ್ನು ಕರ್ನಾಟಕ ಪೊಲೀಸರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಆಧುನಿಕ ಕಾಲದಲ್ಲಿ ಅಪರಾಧಗಳ ಸ್ವರೂಪ ವೇಗವಾಗಿ ಬದಲಾಗುತ್ತಿದ್ದು, ಸೈಬರ್ ಅಪರಾಧ, ಆನ್‌ಲೈನ್ ವಂಚನೆ, ಡಿಜಿಟಲ್ ಮೂಲಭೂತವಾದ, ಡ್ರೋನ್‌ಗಳ ದುರುಪಯೋಗ ಹಾಗೂ ಸಂಘಟಿತ ಅಪರಾಧಗಳಂತಹ ಹೊಸ ಸವಾಲುಗಳು ಎದುರಾಗುತ್ತಿವೆ. ಇಂತಹ ಸವಾಲುಗಳಿಗೆ ಸಾಂಪ್ರದಾಯಿಕ ವಿಧಾನಗಳಿಂದ ಪರಿಣಾಮಕಾರಿ ಉತ್ತರ ನೀಡಲು ಸಾಧ್ಯವಿಲ್ಲ. ಹೀಗಾಗಿ ಹೊಸ ಜ್ಞಾನ, ಆಧುನಿಕ ತಂತ್ರಜ್ಞಾನ ಮತ್ತು ಕಠಿಣ ತರಬೇತಿಯ ಮೂಲಕ ಪೊಲೀಸರನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಅವರು ಹೇಳಿದ್ದಾರೆ.

NSGಯ ವೇಗ, ವೃತ್ತಿಪರತೆ, ಗೋಪ್ಯತೆ ಹಾಗೂ ನಿಖರತೆಯಂತಹ ಕಾರ್ಯಾಚರಣಾ ಗುಣಗಳನ್ನು ಕರ್ನಾಟಕ ಪೊಲೀಸರು ಅಳವಡಿಸಿಕೊಳ್ಳುವ ಮೂಲಕ ರಾಜ್ಯವನ್ನು ಸುರಕ್ಷಿತ ತಾಣವನ್ನಾಗಿಸಲು ಶ್ರಮಿಸಲಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಭಯೋತ್ಪಾದನೆಯಂತಹ ಗಂಭೀರ ಭದ್ರತಾ ಸವಾಲುಗಳನ್ನು ಎದುರಿಸಲು ಗುಪ್ತಚರ ಇಲಾಖೆ, ವಿಶೇಷ ಪಡೆಗಳು, ಫೋರೆನ್ಸಿಕ್, ಅಗ್ನಿಶಾಮಕ ಮತ್ತು ನಾಗರಿಕ ಆಡಳಿತ ಸೇರಿದಂತೆ ವಿವಿಧ ವಿಭಾಗಗಳ ನಡುವೆ ಸಮನ್ವಯ, ಸಂವಹನ ಮತ್ತು ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಫೋರೆನ್ಸಿಕ್ ಸಾಮರ್ಥ್ಯ, ಸೈಬರ್ ತನಿಖೆ, ಡೇಟಾ ಆಧಾರಿತ ಪೊಲೀಸಿಂಗ್ ಹಾಗೂ ತ್ವರಿತ ಪ್ರತಿಕ್ರಿಯೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪೊಲೀಸರು ಕೇವಲ ಅತ್ಯುತ್ತಮ ಯೋಧರಾಗಿ ಮಾತ್ರವಲ್ಲದೆ, ಅತ್ಯುತ್ತಮ ಸಾರ್ವಜನಿಕ ಸೇವಕರಾಗಿಯೂ ಕಾರ್ಯನಿರ್ವಹಿಸಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುವುದು ಸರ್ಕಾರದ ಗುರಿಯಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಮಾರ್ಗದರ್ಶನದಲ್ಲಿ ರಾಜ್ಯದ ಆಂತರಿಕ ಭದ್ರತೆಯನ್ನು ಬಲಪಡಿಸುವುದರ ಜತೆಗೆ ಪೊಲೀಸ್ ಇಲಾಖೆಯನ್ನು ಸಂಪೂರ್ಣವಾಗಿ ಆಧುನೀಕರಿಸಲು ಸರ್ಕಾರ ಬದ್ಧವಾಗಿದೆ. ಪೊಲೀಸ್ ಪಡೆಯ ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸುರಕ್ಷಿತ ಹಾಗೂ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಕೊಡುಗೆ ನೀಡಲಿದ್ದಾರೆ ಎಂದು ಅವರು ಹೇಳಿದ್ದಾರೆ.

Author

ANU News

Follow Me
Other Articles
Previous

Sudeep praises Yash’s ‘Toxic’; lauds actor for taking bold, unconventional route

Next

Karnataka Police to get NSG-led special training to tackle emerging security threats

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • UGC-NET June 2026 results out; over 97,000 qualify for PhD, 4,000+ get JRF
    • UGC-NET ಫಲಿತಾಂಶ ಪ್ರಕಟ; 84 ವಿಷಯಗಳ ಸ್ಕೋರ್‌ಕಾರ್ಡ್ ಬಿಡುಗಡೆ, 4 ಸಾವಿರಕ್ಕೂ ಹೆಚ್ಚು ಮಂದಿಗೆ JRF
    • ಒಂದು ದಶಕದಲ್ಲಿ ಭಾರತದಲ್ಲಿ ಮಲೇರಿಯಾ ಪ್ರಕರಣ, ಸಾವು ಶೇ.80ರಷ್ಟು ಇಳಿಕೆ; 2030ಕ್ಕೆ ನಿರ್ಮೂಲನೆ ಗುರಿ
    • India sees nearly 80% drop in malaria cases, deaths in a decade; govt eyes 2030 elimination target
    • DRI seizes 76kg methamphetamine in Assam, Mizoram; 2 arrested
    Copyright 2026 — ANU News. All rights reserved. Blogsy WordPress Theme