Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ನಾಲ್ಕು ತಿಂಗಳ ಬಳಿಕ ಕೊಡಗಿನ ಎರಡು ಆನೆ ಶಿಬಿರಗಳು ಓಪನ್; ದುಬಾರೆಗೆ ಇನ್ನೂ ಬೀಗ

By Anu News
September 5, 2026 1 Min Read
0

ಮಡಿಕೇರಿ: ಪ್ರವಾಸಿಗರಿಗೆ ಅರಣ್ಯ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಸುರಕ್ಷತಾ ಕಾರಣಗಳಿಂದ ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಲಾಗಿದ್ದ ಕೊಡಗಿನ ಹರಂಗಿ ಹಾಗೂ ಮೈಸೂರು ಗಡಿ ಸಮೀಪದ ಮತ್ತಿಗೋಡು ಆನೆ ಶಿಬಿರಗಳು ಶನಿವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಅಧಿಕೃತವಾಗಿ ಮುಕ್ತಗೊಂಡಿವೆ. ಆದರೆ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿರುವ ದುಬಾರೆ ಆನೆ ಶಿಬಿರಕ್ಕೆ ಮಾತ್ರ ಇನ್ನೂ ಪ್ರವೇಶ ನಿರ್ಬಂಧ ಮುಂದುವರಿದಿದೆ.

ಮೇ ತಿಂಗಳಲ್ಲಿ ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರ್ಘಟನೆಯಲ್ಲಿ ಪ್ರವಾಸಿಗರೊಬ್ಬರು ಹಾಗೂ ಸಾಕಾನೆ ಮೃತಪಟ್ಟಿದ್ದರು. ಘಟನೆಯ ಬಳಿಕ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ಎಲ್ಲ ಆನೆ ಶಿಬಿರಗಳಲ್ಲಿ ಪ್ರವಾಸಿಗರ ಚಟುವಟಿಕೆಗಳನ್ನು ಅರಣ್ಯ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಬಳಿಕ ಆನೆಗಳ ನಿರ್ವಹಣೆ, ಪ್ರವಾಸಿಗರ ಸುರಕ್ಷತೆ ಹಾಗೂ ಶಿಬಿರಗಳಲ್ಲಿನ ವ್ಯವಸ್ಥೆಗಳ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ರಾಜ್ಯ ಸರ್ಕಾರ ರೂಪಿಸಿರುವ ಹೊಸ ಪ್ರಮಾಣಿತ ಕಾರ್ಯಾಚರಣಾ ವಿಧಾನ (SOP) ಅನ್ವಯ ಇದೀಗ ಹರಂಗಿ ಮತ್ತು ಮತ್ತಿಗೋಡು ಶಿಬಿರಗಳನ್ನು ಪುನರಾರಂಭಿಸಲಾಗಿದೆ. ಹೊಸ ನಿಯಮಗಳ ಪ್ರಕಾರ ಪ್ರವಾಸಿಗರು ಆನೆಗಳೊಂದಿಗೆ ನೇರ ಸಂಪರ್ಕ ಹೊಂದುವುದಕ್ಕೆ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ.

ಕುಶಾಲನಗರ ವಲಯ ಅರಣ್ಯಾಧಿಕಾರಿ ಆರ್. ರಕ್ಷಿತ್ ಅವರ ಪ್ರಕಾರ, ಪ್ರವಾಸಿಗರಿಗೆ ಆನೆಗಳನ್ನು ಮುಟ್ಟಲು ಅಥವಾ ಅವುಗಳ ಸಮೀಪ ತೆರಳಲು ಅವಕಾಶ ಇರುವುದಿಲ್ಲ. ಪ್ರವಾಸಿಗರ ವೀಕ್ಷಣೆಯ ವೇಳೆ ಪ್ರತಿಯೊಂದು ಆನೆಯೂ ಅದರ ಮಾವುತನ ಮೇಲ್ವಿಚಾರಣೆಯಲ್ಲಿರಲಿದೆ. ಆನೆಗಳ ಆವರಣದೊಳಗೆ ಅರಣ್ಯ ಇಲಾಖೆ ಸಿಬ್ಬಂದಿ, ಮಾವುತರು ಹಾಗೂ ಅಧಿಕೃತ ಸಿಬ್ಬಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಸುರಕ್ಷತಾ ಕ್ರಮಗಳ ಭಾಗವಾಗಿ ಆನೆಗಳ ಆವರಣದ ಸುತ್ತ ರೈಲ್ವೆ ಮಾದರಿಯ ತಡೆಗೋಡೆಗಳನ್ನು ನಿರ್ಮಿಸಲಾಗಿದೆ. ಪ್ರವಾಸಿಗರು ಆನೆಗಳಿಂದ ಸುರಕ್ಷಿತ ಅಂತರ ಕಾಯ್ದುಕೊಳ್ಳಲು ಸುಮಾರು 10 ಮೀಟರ್ ದೂರದಲ್ಲಿ ನಿರ್ಮಿಸಿರುವ ಮತ್ತೊಂದು ಹಸಿರು ತಡೆಗೋಡೆಯ ಹಿಂದಿನಿಂದಲೇ ಆನೆಗಳನ್ನು ವೀಕ್ಷಿಸಬೇಕು.

ಪ್ರಸ್ತುತ ಹರಂಗಿ ಶಿಬಿರದಲ್ಲಿ ಆರು ಹಾಗೂ ಮತ್ತಿಗೋಡು ಶಿಬಿರದಲ್ಲಿ 12 ಆನೆಗಳಿವೆ.

ಇದೇ ವೇಳೆ, ಮೇ ತಿಂಗಳ ದುರಂತದ ಬಳಿಕ ದುಬಾರೆ ಆನೆ ಶಿಬಿರವನ್ನು ಮುಂದಿನ ಆದೇಶದವರೆಗೆ ಮುಚ್ಚಲಾಗಿದ್ದು, ಪುನರಾರಂಭದ ದಿನಾಂಕವನ್ನು ಅರಣ್ಯ ಇಲಾಖೆ ಇನ್ನೂ ಪ್ರಕಟಿಸಿಲ್ಲ.

Author

Anu News

Follow Me
Other Articles
Previous

Ancient gold coins found in Karnataka village; could they date back centuries?

Next

Elephant camps reopen in Kodagu with stricter safety norms; Dubare remains shut

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಜನರ ಮನೆ ಬಾಗಿಲಿಗೆ ಸರ್ಕಾರ; ‘ಪ್ರಜಾಸೇವಾ ಅಭಿಯಾನ’ಕ್ಕೆ ಡಿಕೆಶಿ ಚಾಲನೆ
    • Karnataka launches ‘Praja Seva’ campaign to take government services to people’s doorsteps
    • Elephant camps reopen in Kodagu with stricter safety norms; Dubare remains shut
    • ನಾಲ್ಕು ತಿಂಗಳ ಬಳಿಕ ಕೊಡಗಿನ ಎರಡು ಆನೆ ಶಿಬಿರಗಳು ಓಪನ್; ದುಬಾರೆಗೆ ಇನ್ನೂ ಬೀಗ
    • Ancient gold coins found in Karnataka village; could they date back centuries?
    Copyright 2026 — ANU News. All rights reserved. Blogsy WordPress Theme