ಎಲ್ ನಿನೋ ಆತಂಕ: 315 ಜಿಲ್ಲೆಗಳಿಗೆ ಕೇಂದ್ರದ ಖಾರಿಫ್ ತುರ್ತು ಯೋಜನೆ
ನವದೆಹಲಿ: ನೈಋತ್ಯ ಮಾನ್ಸೂನ್ ದುರ್ಬಲಗೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವ ಹಾಗೂ ಎಲ್ ನಿನೋ ಪರಿಣಾಮದ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಖಾರಿಫ್ ಹಂಗಾಮಿಯನ್ನು ರಕ್ಷಿಸಲು ಕೇಂದ್ರ ಸರ್ಕಾರ ರಾಷ್ಟ್ರವ್ಯಾಪಿ ತುರ್ತು ಯೋಜನೆಯನ್ನು ಸಕ್ರಿಯಗೊಳಿಸಿದೆ. ಸಂಭಾವ್ಯ ಬೆಳೆ ನಷ್ಟದಿಂದ ರೈತರನ್ನು ಕಾಪಾಡಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ, ಪರಿಸ್ಥಿತಿ ಗಂಭೀರವಾಗುವವರೆಗೆ ಕಾಯದೆ ಮುಂಚಿತ ತುರ್ತು ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿಸಲಾಯಿತು. ಸಭೆಯಲ್ಲಿ ರಾಜ್ಯಗಳ ಕೃಷಿ ಸಚಿವರು, ಜಿಲ್ಲಾಧಿಕಾರಿಗಳು, ಭಾರತೀಯ ಹವಾಮಾನ ಇಲಾಖೆ (IMD), ಐಸಿಎಆರ್ ಹಾಗೂ ಇತರ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ದೇಶದಾದ್ಯಂತ 315 ಜಿಲ್ಲೆಗಳು ಕಡಿಮೆ ಮಳೆಯ ಅಪಾಯದಲ್ಲಿವೆ ಎಂದು ಗುರುತಿಸಲಾಗಿದ್ದು, ಅವುಗಳಲ್ಲಿ 111 ಜಿಲ್ಲೆಗಳು ಅತ್ಯಂತ ಸೂಕ್ಷ್ಮ ಪ್ರದೇಶಗಳೆಂದು ವರ್ಗೀಕರಿಸಲಾಗಿದೆ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಬಿಹಾರ, ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ ಮತ್ತು ಒಡಿಶಾದ ಹಲವು ಜಿಲ್ಲೆಗಳು ಕೇಂದ್ರದ ನಿಗಾದಲ್ಲಿವೆ.

ದುರ್ಬಲ ಮಾನ್ಸೂನ್ ಪರಿಣಾಮವನ್ನು ತಗ್ಗಿಸಲು ಐಸಿಎಆರ್ ಜಿಲ್ಲಾ-ನಿರ್ದಿಷ್ಟ ತುರ್ತು ಯೋಜನೆಗಳನ್ನು ಸಿದ್ಧಪಡಿಸಿದೆ. ಪರ್ಯಾಯ ಬೆಳೆ ಮಾದರಿಗಳು, ಬೆಳೆ ವೈವಿಧ್ಯೀಕರಣ, ನೀರಿನ ಸಮರ್ಪಕ ನಿರ್ವಹಣೆ ಹಾಗೂ ಮಳೆಯಾಶ್ರಿತ ಪ್ರದೇಶಗಳ ರೈತರಿಗೆ ಬೆಂಬಲ ನೀಡುವ ಕ್ರಮಗಳಿಗೆ ಆದ್ಯತೆ ನೀಡಲಾಗಿದೆ.
ಕೊಳಗಳು, ಚೆಕ್ಡ್ಯಾಂಗಳು, ಕೃಷಿ ಜಲಾಶಯಗಳು ಸೇರಿದಂತೆ ಸ್ಥಳೀಯ ಜಲಮೂಲಗಳ ಪುನಶ್ಚೇತನಕ್ಕೆ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ದ್ವಿದಳ ಧಾನ್ಯಗಳು, ರಾಗಿ ಹಾಗೂ ಎಣ್ಣೆಬೀಜಗಳಂತಹ ಕಡಿಮೆ ನೀರು ಬಳಸುವ ಬೆಳೆಗಳತ್ತ ರೈತರನ್ನು ಪ್ರೋತ್ಸಾಹಿಸಲಾಗುತ್ತಿದೆ.
ಬೀಜ ಮತ್ತು ರಸಗೊಬ್ಬರಗಳ ಸಾಕಷ್ಟು ದಾಸ್ತಾನು ಸಿದ್ಧವಾಗಿದ್ದು, ಅಗತ್ಯವಿದ್ದಲ್ಲಿ ಮರುಬಿತ್ತನೆಗೆ ಹೆಚ್ಚುವರಿ ಸಂಗ್ರಹವನ್ನು ವ್ಯವಸ್ಥೆ ಮಾಡಲಾಗಿದೆ. ಜಾನುವಾರುಗಳಿಗೆ ಮೇವು ಲಭ್ಯತೆಯನ್ನೂ ಖಚಿತಪಡಿಸಲಾಗುತ್ತಿದೆ. ಭಯಪಡುವ ಅಗತ್ಯವಿಲ್ಲ. ದುರ್ಬಲ ಮಾನ್ಸೂನ್ನಿಂದ ಎದುರಾಗುವ ಯಾವುದೇ ಸವಾಲನ್ನು ನಿಭಾಯಿಸಲು ಸರ್ಕಾರ ಸಂಪೂರ್ಣ ಸಜ್ಜಾಗಿದೆ ಎಂದು ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.