Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್‌ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

By ANU News
September 2, 2026 1 Min Read
0

ಬೆಂಗಳೂರು: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಧ್ವನಿಯನ್ನು ಅಡಗಿಸಲು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಅಮಿತ್ ಶಾ ಅವರು ಎಫ್‌ಐಆರ್‌ ದಾಖಲಿಸುವ ಮೂಲಕ ಪ್ರಯತ್ನಿಸುತ್ತಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಆರೋಪಿಸಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬುಧವಾರ ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಧಕ್ಕೆಯಾಗುತ್ತಿರುವುದನ್ನು ಖಂಡಿಸಿ ರಾಜ್ಯದಾದ್ಯಂತ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.

ಯುವ ಕಾಂಗ್ರೆಸ್ ಹಾಗೂ ಎನ್‌ಎಸ್‌ಯುಐ ಕಾರ್ಯಕರ್ತರು ಬಿಜೆಪಿ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸಿ, ಬಿಜೆಪಿ ನಾಯಕರಿಗೆ ಕಪ್ಪು ಬಾವುಟ ಪ್ರದರ್ಶಿಸಬೇಕು ಎಂದು ಕರೆ ನೀಡಿದರು. “ಸಂವಿಧಾನವನ್ನು ಉಳಿಸಿಕೊಂಡು ದೇಶದ ಉಜ್ವಲ ಭವಿಷ್ಯ ರೂಪಿಸಬೇಕು. ಯುವಕರು ಈ ಹೋರಾಟವನ್ನು ಮುಂದುವರಿಸದಿದ್ದರೆ ದೇಶದ ಭವಿಷ್ಯ ಕರಾಳವಾಗಲಿದೆ,” ಎಂದು ಹೇಳಿದರು.

ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರಾಗಿದ್ದು, ದೀರ್ಘ ರಾಜಕೀಯ ಅನುಭವ ಹೊಂದಿದ್ದಾರೆ. ಅವರು ಸಾರ್ವಜನಿಕ ಭಾಷಣ ಮಾಡಿದ ಸ್ಥಳವನ್ನು ರಾಮಸೇನೆ ಕಾರ್ಯಕರ್ತರು ಹವನ ನಡೆಸಿ ಗಂಗಾಜಲದಿಂದ ಶುದ್ಧೀಕರಿಸಿರುವುದು ಖಂಡನೀಯ ಎಂದು ಹರಿಪ್ರಸಾದ್ ಹೇಳಿದರು. ಈ ಘಟನೆ ವಿರುದ್ಧ ಪ್ರತಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಯಬೇಕು ಎಂದರು.

ತಾರತಮ್ಯದ ವಿರುದ್ಧ ಹೋರಾಡುವುದೇ ಕಾಂಗ್ರೆಸ್‌ನ ಮೂಲ ಉದ್ದೇಶ ಎಂದು ಹೇಳಿದ ಅವರು, ಬಾಬಾಸಾಹೇಬ್ ಅಂಬೇಡ್ಕರ್ ರೂಪಿಸಿದ ಸಂವಿಧಾನವು ದಲಿತರು ಸೇರಿದಂತೆ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ ಎಂದರು.

ಸಂವಿಧಾನ ಜಾರಿಗೆ ಬರುವ ಮೊದಲು ದಲಿತರಿಗೆ ದೇವಾಲಯ ಪ್ರವೇಶ, ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರ ಸೇರಿದಂತೆ ಹಲವು ಹಕ್ಕುಗಳು ಇರಲಿಲ್ಲ. ಸಂವಿಧಾನದಿಂದ ಈ ಹಕ್ಕುಗಳು ದೊರೆತಿವೆ ಎಂದು ಹೇಳಿದರು.

ಖರ್ಗೆ ವಿರುದ್ಧದ ಕೃತ್ಯವನ್ನು ರಾಹುಲ್ ಗಾಂಧಿ ಪ್ರಶ್ನಿಸಿದ್ದಕ್ಕೆ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಆರೋಪಿಸಿದ ಹರಿಪ್ರಸಾದ್, “ನಾವು ಎಫ್‌ಐಆರ್‌ಗೆ ಹೆದರುವುದಿಲ್ಲ. ಸತ್ಯ ಮತ್ತು ಅಹಿಂಸೆಯ ಮಾರ್ಗದಲ್ಲಿ ಹೋರಾಟ ಮುಂದುವರಿಸುತ್ತೇವೆ,” ಎಂದರು.

ಸಂವಿಧಾನ, ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜವನ್ನು ರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಂವಿಧಾನಕ್ಕೆ ಧಕ್ಕೆಯಾದರೆ ಕಾಂಗ್ರೆಸ್‌ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

Author

ANU News

Follow Me
Other Articles
Previous

Tamil Nadu bans smartphones at 52 temples; devotees to pay Rs 5 to deposit phones

Next

Congress stages protest in Bengaluru over FIR against Rahul Gandhi

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ಘೋರ ಅನ್ಯಾಯ: ಸಿದ್ದರಾಮಯ್ಯ
    • Congress stages protest in Bengaluru over FIR against Rahul Gandhi
    • ರಾಹುಲ್ ಗಾಂಧಿ ವಿರುದ್ಧದ ಎಫ್‌ಐಆರ್‌ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
    • Tamil Nadu bans smartphones at 52 temples; devotees to pay Rs 5 to deposit phones
    • ತಮಿಳುನಾಡಿನ 52 ದೇಗುಲಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾನ್‌: ₹5 ಕೊಟ್ಟು ಮೊಬೈಲ್‌ ಠೇವಣಿ ಕಡ್ಡಾಯ!
    Copyright 2026 — ANU News. All rights reserved. Blogsy WordPress Theme