ಬೆಂಗಳೂರು ಹೆಬ್ಬಾಳ ಪೊಲೀಸರ ಭರ್ಜರಿ ಕಾರ್ಯಾಚರಣೆ: ₹34 ಕೋಟಿ ಮೌಲ್ಯದ 17.282 ಕೆಜಿ ಎಂಡಿಎಂಎ ವಶ; ನಾಲ್ವರ ಬಂಧನ
ಬೆಂಗಳೂರು: ನಗರದಲ್ಲಿ ಮಾದಕ ವಸ್ತು ಜಾಲದ ವಿರುದ್ಧ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಬೆಂಗಳೂರು ಪೊಲೀಸರು, ₹34 ಕೋಟಿ ಮೌಲ್ಯದ 17 ಕೆಜಿ 282 ಗ್ರಾಂ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಮೇ 11, 2026ರಂದು ಎನ್ಡಿಪಿಎಸ್ (NDPS) ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಈ ಹಿಂದೆ ಮೂವರು ವಿದೇಶಿಯರು ಸೇರಿದಂತೆ ಎಂಟು ಆರೋಪಿಗಳನ್ನು ಬಂಧಿಸಲಾಗಿತ್ತು. ಆ ವೇಳೆ ₹35 ಕೋಟಿ ಮೌಲ್ಯದ 17 ಕೆಜಿ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಪ್ರಕರಣದ ತನಿಖೆಯನ್ನು ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮುಂದುವರಿಸಲಾಗಿತ್ತು.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತನಿಖೆ ನಡೆಸಿದ ಪೊಲೀಸರು, ಬಾತ್ಮಿದಾರರ ಮಾಹಿತಿ ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಜುಲೈ 8ರಂದು ಚಿಕ್ಕಬಾಣಾವರ ಕೆರೆಯ ಸಮೀಪ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ವಶದಿಂದ 6 ಕೆಜಿ 589 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಬಂಧಿತರಿಂದ ದೊರೆತ ಮಾಹಿತಿಯ ಮೇರೆಗೆ ಅದೇ ದಿನ ದೆಹಲಿಯ ಪ್ರಕಾಶ್ ಮೊಹಲ್ಲಾ ಪ್ರದೇಶದಲ್ಲಿ ನೈಜೀರಿಯಾ ಮೂಲದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ, ಆತನಿಂದ 3 ಕೆಜಿ 400 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.
ಜುಲೈ 9ರಂದು ಬೆಂಗಳೂರಿನ ಅಬ್ಬಿಗೆರೆ ನಿವಾಸಿಯೊಬ್ಬನ ಮನೆಯಲ್ಲಿ ಶೋಧ ನಡೆಸಿದ ವೇಳೆ 7 ಕೆಜಿ 293 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. ಪ್ರಕರಣದ ಮುಂದುವರಿದ ತನಿಖೆಯಲ್ಲಿ ಒಟ್ಟು 17 ಕೆಜಿ 282 ಗ್ರಾಂ ಎಂಡಿಎಂಎ, 13 ಮೊಬೈಲ್ ಫೋನ್ಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಎಸ್. ನೇಮಗೌಡ ಅವರ ಮಾರ್ಗದರ್ಶನದಲ್ಲಿ, ಜೆ.ಸಿ.ನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ತನ್ನೀರ್ ಕೆ.ಎಸ್. ಅವರ ನೇತೃತ್ವದಲ್ಲಿ ಹೆಬ್ಬಾಳ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಭೈರ, ಪೊಲೀಸ್ ಸಬ್-ಇನ್ಸ್ಪೆಕ್ಟರ್ ವಿನೋದ ಜಿರಗಾಳೆ, ಕಿರಣ.ಎಂ.ಎಂ., ಮೈಲಾರಿ ಸುಣಗಾರ, ASI ಗಳಾದ ಗಜೇಂದ್.ಎನ್. ಎ., ಜಗದೀಶ, ಹೆಚ್.ಸಿ.ಗಳಾದ ರಾಠೋಡ, ಅಬ್ದುಲ್ ರೆಹಮಾನ್, ಜ್ಯೋತಿಬಾಯಿ, ಸುನಂದಾ, ಸಿಬ್ಬಂದಿಗಳಾದ ಮಲ್ಲಪ್ಪ.ಕೆ., ಶ್ರೀಶೈಲ ಬಾಸಗಿ, ಅಮರೇಶ, ಪರುಶುರಾಮ, ಬಸವರಾಜ್ ಪಾಟೀಲ್ ರವರುಗಳನ್ನೊಳಗೊಂಡ ತಂಡವು ಪ್ರಕರಣಗಳನ್ನ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.