ಆಲ್ದೂರಿನಿಂದ ಅಂತರಿಕ್ಷ ಉದ್ಯಮದ ಶಿಖರಕ್ಕೆ: ಪಿಕ್ಸೆಲ್ ಸಿಇಒ ಅವೈಸ್ ಅಹ್ಮದ್ ಯಶೋಗಾಥೆ
(ಜಯ ಪ್ರಕಾಶ್)
ಬೆಂಗಳೂರು : ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಬಾಲ್ಯ ಕಳೆದಿದ್ದ ಅವೈಸ್ ಅಹ್ಮದ್ ಅವರು ಇಂದು ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರದ ಪ್ರಮುಖ ಯುವ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. 28ನೇ ವಯಸ್ಸಿನಲ್ಲೇ ಅವರು ಬೆಂಗಳೂರು ಮೂಲದ ಪಿಕ್ಸೆಲ್ ಸ್ಪೇಸ್ ಟೆಕ್ನಾಲಜೀಸ್ ಸಂಸ್ಥೆಯ ಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ, ಹೈಪರ್ಸ್ಪೆಕ್ಟ್ರಲ್ ಭೂ–ವೀಕ್ಷಣಾ ದತ್ತಾಂಶ ಒದಗಿಸಲು ನಾಸಾದೊಂದಿಗೆ ಒಪ್ಪಂದ ಮಾಡಿಕೊಂಡ ಮೊದಲ ಭಾರತೀಯ ಖಾಸಗಿ ಬಾಹ್ಯಾಕಾಶ ಸಂಸ್ಥೆಯಾಗಿ ಪಿಕ್ಸೆಲ್ ಅನ್ನು ಮುನ್ನಡೆಸಿದ್ದಾರೆ.
![]()
ಆಲ್ದೂರಿನಲ್ಲಿ ಔಷಧ ಅಂಗಡಿ ನಡೆಸುತ್ತಿದ್ದ ತಂದೆ ನದೀಮ್ ಅಹ್ಮದ್ ಅವರು ಬಾಲ್ಯದಲ್ಲೇ ವಿಜ್ಞಾನ ಸಂಬಂಧಿತ ಪುಸ್ತಕಗಳನ್ನು ತಂದುಕೊಡುತ್ತಿದ್ದುದೇ ಅವೈಸ್ ಅವರಲ್ಲಿ ಬಾಹ್ಯಾಕಾಶದ ಕುರಿತ ಕುತೂಹಲ ಬೆಳೆಸಿತು. ಸೌರವ್ಯೂಹ, ನೀಹಾರಿಕೆಗಳು ಮತ್ತು ಕಪ್ಪು ಕುಳಿಗಳ ಕುರಿತ ಪುಸ್ತಕಗಳು ಅವರ ಕನಸುಗಳಿಗೆ ದಿಕ್ಕು ತೋರಿದವು ಎಂದು ಅವರು ಹೇಳುತ್ತಾರೆ. ತಾಯಿ ಗಜಲಾ ತಶ್ಫೀನ್ ಹಾಗೂ ತಂದೆ ತಮ್ಮ ಆಸಕ್ತಿಯನ್ನು ಬೆಳೆಸಲು ನಿರಂತರ ಪ್ರೋತ್ಸಾಹ ನೀಡಿದರು.
ಅಕ್ಷರ ಪಬ್ಲಿಕ್ ಶಾಲೆ, ಪೂರ್ಣ ಪ್ರಜ್ಞಾ ಶಾಲೆ ಹಾಗೂ ಮಂಗಳೂರಿನಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ಅವರು, ಬಳಿಕ ಬಿಟ್ಸ್ ಪಿಲಾನಿಯಲ್ಲಿ ಗಣಿತ ಮತ್ತು ಉತ್ಪಾದನಾ ಎಂಜಿನಿಯರಿಂಗ್ ಪದವಿ ಪಡೆದರು. ವಿದ್ಯಾರ್ಥಿ ಉಪಗ್ರಹ ಯೋಜನೆಯಲ್ಲಿ ಭಾಗವಹಿಸುವ ಮೂಲಕ ಇಸ್ರೋ ವಿಜ್ಞಾನಿಗಳೊಂದಿಗೆ ಕೆಲಸ ಮಾಡಿದ ಅನುಭವವು ಅವರ ವೃತ್ತಿಜೀವನಕ್ಕೆ ಹೊಸ ದಿಕ್ಕು ನೀಡಿತು.

2017ರಲ್ಲಿ ಹೈಪರ್ಲೂಪ್ ಇಂಡಿಯಾ ತಂಡದೊಂದಿಗೆ ಸ್ಪೇಸ್ಎಕ್ಸ್ ಹೈಪರ್ಲೂಪ್ ಸ್ಪರ್ಧೆಯಲ್ಲಿ ಪಾಲ್ಗೊಂಡ ವೇಳೆ ಅಮೆರಿಕದಲ್ಲಿ ಎಲೋನ್ ಮಸ್ಕ್ ಅವರನ್ನು ಭೇಟಿಯಾಗುವ ಅವಕಾಶ ದೊರೆಯಿತು. ಸ್ಪೇಸ್ಎಕ್ಸ್ನ ಕಾರ್ಯವೈಖರಿಯನ್ನು ಸಮೀಪದಿಂದ ಕಂಡ ಅನುಭವವೇ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲೇ ಮುಂದುವರಿಯುವ ನಿರ್ಧಾರಕ್ಕೆ ಕಾರಣವಾಯಿತು ಎಂದು ಅವರು ಸ್ಮರಿಸುತ್ತಾರೆ.
2019ರಲ್ಲಿ ಪದವಿ ಪೂರ್ಣಗೊಳ್ಳುವ ಮುನ್ನವೇ ಪಿಕ್ಸೆಲ್ ಸ್ಪೇಸ್ ಟೆಕ್ನಾಲಜೀಸ್ ಸಂಸ್ಥೆಯನ್ನು ಆರಂಭಿಸಿದ ಅವರು, ಇದುವರೆಗೆ ಒಂಬತ್ತು ಹೈಪರ್ಸ್ಪೆಕ್ಟ್ರಲ್ ಉಪಗ್ರಹಗಳನ್ನು ಉಡಾವಣೆ ಮಾಡಿದ್ದಾರೆ. ಮಣ್ಣಿನ ಗುಣಮಟ್ಟ, ಬೆಳೆ ರೋಗಗಳು, ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಧ್ಯಯನಕ್ಕೆ ಈ ತಂತ್ರಜ್ಞಾನ ನೆರವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

ಸಂಸ್ಥೆಯು ಇದುವರೆಗೆ ₹960 ಕೋಟಿ ಹೂಡಿಕೆ ಸಂಗ್ರಹಿಸಿದ್ದು, ಸರ್ಕಾರದ ಬಾಹ್ಯಾಕಾಶ ನೀತಿ ಹಾಗೂ ಖಾಸಗಿ ವಲಯಕ್ಕೆ ನೀಡಿದ ಅವಕಾಶಗಳು ಬೆಳವಣಿಗೆಗೆ ಸಹಕಾರಿಯಾಗಿವೆ ಎಂದು ಅವೈಸ್ ಹೇಳಿದ್ದಾರೆ. ಪ್ರಸ್ತುತ 275 ಮಂದಿ ಸಿಬ್ಬಂದಿಯ ತಂಡವನ್ನು ಅವರು ಮುನ್ನಡೆಸುತ್ತಿದ್ದಾರೆ.
ಮಗನ ಸಾಧನೆಯನ್ನು ನೆನಪಿಸಿಕೊಳ್ಳುವ ತಂದೆ ನದೀಮ್ ಅಹ್ಮದ್, ಶಿಕ್ಷಣಕ್ಕಾಗಿ ಸಾಲ ಮಾಡಿದ್ದು, ಚಿನ್ನವನ್ನು ಒತ್ತೆ ಇಟ್ಟ ಸಂದರ್ಭಗಳನ್ನೂ ಸ್ಮರಿಸುತ್ತಾರೆ. “ಅವನ ಪರಿಶ್ರಮವೇ ಇಂದಿನ ಯಶಸ್ಸಿಗೆ ಕಾರಣ. ಅವನ ಸಾಧನೆ ನಮ್ಮ ಕುಟುಂಬಕ್ಕೆ ಹೆಮ್ಮೆಯ ವಿಷಯ” ಎಂದು ಅವರು ಹೇಳಿದ್ದಾರೆ.