‘ಮುಂದಿನ 100 ಭಾನುವಾರ ನಶಾ ಮುಕ್ತ ಭಾರತಕ್ಕಾಗಿ’ ರಾಷ್ಟ್ರವ್ಯಾಪಿ ಯುವ ಆಂದೋಲನ; ಪ್ರಧಾನಿ ಮೋದಿ ಕರೆ
ನವದೆಹಲಿ: ಮಾದಕ ದ್ರವ್ಯ ಮುಕ್ತ ಭಾರತ ನಿರ್ಮಾಣದ ಗುರಿಯೊಂದಿಗೆ ಕೇಂದ್ರ ಸರ್ಕಾರ ಆರಂಭಿಸಿರುವ ‘ನಶಾ ಮುಕ್ತ ಯುವ ಫಾರ್ ವಿಕ್ಷಿತ್ ಭಾರತ್ ಸಂಕಲ್ಪ ಅಭಿಯಾನ’ಕ್ಕೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಧಿಕೃತ ಚಾಲನೆ ನೀಡಿದರು. ದೇಶದ 28 ಸಾವಿರಕ್ಕೂ ಹೆಚ್ಚು ಸ್ಥಳಗಳಿಂದ ಒಂದು ಕೋಟಿಗೂ ಅಧಿಕ ಯುವಕರು ವರ್ಚುವಲ್ ಮೂಲಕ ಭಾಗವಹಿಸಿ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞೆ ಸ್ವೀಕರಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಅಭಿಯಾನವು ಕೇವಲ ಮಾದಕ ವ್ಯಸನದ ವಿರುದ್ಧದ ಹೋರಾಟವಲ್ಲ, ಕುಟುಂಬ, ಸಮಾಜ ಮತ್ತು ದೇಶದ ಭವಿಷ್ಯವನ್ನು ಸುರಕ್ಷಿತಗೊಳಿಸುವ ರಾಷ್ಟ್ರೀಯ ಚಳುವಳಿಯಾಗಿದೆ ಎಂದು ಹೇಳಿದರು.
2047ರ ವೇಳೆಗೆ ವಿಕ್ಷಿತ್ ಭಾರತ ನಿರ್ಮಾಣದ ಗುರಿ ಸಾಕಾರಗೊಳ್ಳಬೇಕಾದರೆ ದೈಹಿಕವಾಗಿ ಸದೃಢ, ಮಾನಸಿಕವಾಗಿ ಬಲಿಷ್ಠ ಹಾಗೂ ವ್ಯಸನ ಮುಕ್ತ ಯುವಜನರ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
“ಮುಂದಿನ 100 ಭಾನುವಾರಗಳು ನಶಾ ಮುಕ್ತ ಭಾರತದತ್ತ 100 ಬಲಿಷ್ಠ ಹೆಜ್ಜೆಗಳಾಗಲಿವೆ” ಎಂದು ಪ್ರಧಾನಿ ಹೇಳಿದ ಅವರು, ಯುವಜನರನ್ನು ನಿರಂತರವಾಗಿ ತೊಡಗಿಸಿಕೊಳ್ಳಲು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗ, ಧ್ಯಾನ ಹಾಗೂ ಸಮುದಾಯ ಸೇವೆಯಂತಹ ವಾರವಾರದ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.

ಕಳೆದ ವರ್ಷ ಕಾಶಿಯಲ್ಲಿ ಪ್ರಾಯೋಗಿಕವಾಗಿ ಆರಂಭಗೊಂಡಿದ್ದ ಈ ಅಭಿಯಾನ, ಈಗ ದೇಶವ್ಯಾಪಿ ಚಳುವಳಿಯಾಗಿ ವಿಸ್ತರಿಸಿದೆ. ಕಾಶಿ ಘೋಷಣೆ ಅಡಿಯಲ್ಲಿ 125ಕ್ಕೂ ಹೆಚ್ಚು ಆಧ್ಯಾತ್ಮಿಕ ಸಂಸ್ಥೆಗಳು ಹಾಗೂ ಹಲವು ಸ್ವಯಂಸೇವಾ ಸಂಘಟನೆಗಳು ಈ ಅಭಿಯಾನಕ್ಕೆ ಕೈಜೋಡಿಸಿವೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಮಾತನಾಡಿ, ಎಂವೈ ಭಾರತ್ ವೇದಿಕೆಯ ಮೂಲಕ ಈಗಾಗಲೇ 2.23 ಕೋಟಿಗೂ ಹೆಚ್ಚು ಯುವಕರನ್ನು ಸಂಪರ್ಕಿಸಲಾಗಿದೆ. ಸ್ವಯಂಸೇವೆ, ನಾಯಕತ್ವ ಮತ್ತು ರಾಷ್ಟ್ರಸೇವೆಯ ಮನೋಭಾವ ಬೆಳೆಸುವ ಮೂಲಕ ಈ ಅಭಿಯಾನವನ್ನು ಜನಾಂದೋಲನವಾಗಿ ರೂಪಿಸಲಾಗುತ್ತಿದೆ ಎಂದರು.
100 ವಾರಗಳ ಕಾಲ ನಡೆಯಲಿರುವ ಈ ಅಭಿಯಾನದ ಮೂಲಕ ಮಾದಕ ದ್ರವ್ಯ ದುರುಪಯೋಗದ ವಿರುದ್ಧ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರಾಜ್ಯ ಸಚಿವೆ ರಕ್ಷಾ ನಿಖಿಲ್ ಖಾಡ್ಸೆ, 26 ರಾಜ್ಯಪಾಲರು, 11 ಮುಖ್ಯಮಂತ್ರಿಗಳು, ಎನ್ಎಸ್ಎಸ್ ಸ್ವಯಂಸೇವಕರು, ಎಂವೈ ಭಾರತ್ ಸದಸ್ಯರು ಹಾಗೂ ದೇಶದ ವಿವಿಧ ಭಾಗಗಳ ವಿದ್ಯಾರ್ಥಿಗಳು ಭಾಗವಹಿಸಿದರು.
ಮಾದಕ ವ್ಯಸನವು ಯುವಕರ ಭವಿಷ್ಯ, ಕುಟುಂಬ ಹಾಗೂ ಸಮಾಜವನ್ನು ಹಾಳುಮಾಡುತ್ತದೆ ಎಂದು ಎಚ್ಚರಿಸಿದ ಪ್ರಧಾನಿ ಮೋದಿ, ಯುವಜನರು ಶಿಕ್ಷಣ, ನಾವೀನ್ಯತೆ, ಕ್ರೀಡೆ ಮತ್ತು ಉದ್ಯಮಶೀಲತೆಯತ್ತ ಗಮನಹರಿಸಬೇಕು ಎಂದು ಕರೆ ನೀಡಿದರು. ವ್ಯಸನದ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.
ಮಾದಕ ದ್ರವ್ಯ ಕಳ್ಳಸಾಗಣೆ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ದೊಡ್ಡ ಪ್ರಮಾಣದ ವಶಪಡಿಸಿಕೊಳ್ಳುವಿಕೆ ಮತ್ತು ಕಳ್ಳಸಾಗಣೆದಾರರ ಬಂಧನಗಳು ನಡೆಯುತ್ತಿವೆ ಎಂದು ತಿಳಿಸಿದ ಪ್ರಧಾನಿ, ವ್ಯಸನದಿಂದ ಹೊರಬರಲು ಪ್ರಯತ್ನಿಸುತ್ತಿರುವವರಿಗೆ ಸಮಾಜ ಬೆಂಬಲ ನೀಡಬೇಕು, ಅವರಿಗೆ ಎರಡನೇ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪ್ರತಿಯೊಬ್ಬ ನಾಗರಿಕರೂ ಈ ಆಂದೋಲನದಲ್ಲಿ ಭಾಗಿಯಾಗುವಂತೆ ಕರೆ ನೀಡಿದ ಪ್ರಧಾನಿ ಮೋದಿ, 2047ರ ವೇಳೆಗೆ ಭಾರತದ ಯುವಶಕ್ತಿ ದೇಶವನ್ನು ಆರೋಗ್ಯಕರ, ವ್ಯಸನಮುಕ್ತ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.