Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ; ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’.

By ANU News
September 7, 2026 4 Min Read
0

ಸಮವಸ್ತ್ರದ ಹಿಂದೆ ಮಿಡಿಯುವ ಮಾನವೀಯ ಹೃದಯ.. ಪೊಲೀಸ್ ಇಲಾಖೆಯ ‘ಸುವರ್ಣ’ ಯುವಜನರ ಪಾಲಿಕಗೆ ಆತ್ಮೀಯ ‘ಶಿಕ್ಷಕಿ’. ಯಾಕೆಂದರೆ ಇವರದ್ದು ಅರ್ಥಪೂರ್ಣ ಅನುಭವ ಕಥನ.

ಬೆಂಗಳೂರು: ಪೊಲೀಸ್ ಸಮವಸ್ತ್ರ ಕಂಡಾಗ ಸಾಮಾನ್ಯವಾಗಿ ನೆನಪಾಗುವುದು ಶಿಸ್ತು, ಕಾನೂನು ಮತ್ತು ಕಠಿಣ ಕ್ರಮ. ಆದರೆ ಅದೇ ಸಮವಸ್ತ್ರದೊಳಗೆ ಮಿಡಿಯುವ ಮಾನವೀಯ ಹೃದಯವೊಂದಿದೆ. ಅಪರಾಧಿಗಳ ವಿರುದ್ಧ ಕಾರ್ಯಾಚರಣೆಯಲ್ಲಿ ನಿಷ್ಠುರತೆ ತೋರುವ ಪೊಲೀಸ್ ಅಧಿಕಾರಿ, ಮತ್ತೊಂದೆಡೆ ಯುವಜನರ ಮುಂದೆ ನಿಂತು ಬದುಕಿನ ಪಾಠ ಹೇಳುವ ಆತ್ಮೀಯ ಶಿಕ್ಷಕಿಯಾಗಬಹುದು ಎಂಬುದಕ್ಕೆ ರೀನಾ ಸುವರ್ಣ ಅವರ ಸೇವಾ ಪಯಣ ಒಂದು ಉದಾಹರಣೆ.

ಹಿರಿಯ KSPS ಅಧಿಕಾರಿ ರೀನಾ ಸುವರ್ಣ ಅವರು ಪೊಲೀಸ್ ಇಲಾಖೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಕಳ್ಳರ ಬೆನ್ನತ್ತುವುದರಿಂದ ಹಿಡಿದು ರೌಡಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವುದು, ಮಾದಕ ವಸ್ತುಗಳ ಜಾಲವನ್ನು ಭೇದಿಸುವುದರಿಂದ ಹಿಡಿದು ಸಾರ್ವಜನಿಕರ ಸುರಕ್ಷತೆಗೆ ಸಂಬಂಧಿಸಿದ ತುರ್ತು ಸಂದರ್ಭಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುವುದು—ಅವರ ಸೇವೆಯ ಹಲವು ಮಜಲುಗಳಲ್ಲಿ ಕಾರ್ಯಾಚರಣೆಯ ಛಾಪು ಕಾಣಿಸುತ್ತದೆ. ಆದರೆ ರೀನಾ ಸುವರ್ಣ ಅವರ ವ್ಯಕ್ತಿತ್ವದ ಮತ್ತೊಂದು ಮುಖವೂ ಇದೆ. ಶಿಕ್ಷಣ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಮಾಜಮುಖಿ ಸಂಘಟನೆಗಳ ಕಾರ್ಯಕ್ರಮಗಳಿಗೆ ತೆರಳಿದಾಗ ಅವರು ಕೇವಲ ಪೊಲೀಸ್ ಅಧಿಕಾರಿಯಾಗಿ ಉಳಿಯುವುದಿಲ್ಲ. ಯುವಜನರೊಂದಿಗೆ ಸಂವಾದ ನಡೆಸುವ ಶಿಕ್ಷಕಿಯಂತೆ ಕಾಣಿಸಿಕೊಳ್ಳುತ್ತಾರೆ.

 “ಅಧಿಕೃತವಾಗಿ ಶಿಕ್ಷಕಿ ಅಲ್ಲದಿದ್ದರೂ ಯುವಜನರಿಗೆ ಬದುಕಿನ ಪಾಠ ಮಾಡುತ್ತಾ ಸಮಾಜಮುಖಿಯಾಗಿರುವ ಇವರು ಪೊಲೀಸ್ ಅಧಿಕಾರಿ ಮಾತ್ರವಲ್ಲ ‘ಅಪರೂಪದ ಶಿಕ್ಷಕಿ’. ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ರೀನಾ ಸುವರ್ಣ ಅವರ ಕುರಿತ ಈ ಲೇಖನವೂ ಅರ್ಥಪೂರ್ಣ”.

‘ಕೇಸ್‌ಗಳ ಕಥೆ’ಯಿಂದ ಬದುಕಿನ ಪಾಠ:

ಪೊಲೀಸ್ ಅಧಿಕಾರಿಯ ಅನುಭವ ಎಂದರೆ ಕೇವಲ ಅಪರಾಧಿಗಳ ಬಂಧನದ ದಾಖಲೆಗಳಲ್ಲ. ಅದರ ಹಿಂದೆ ಬದುಕಿನ ಅನೇಕ ಮುಖಗಳಿರುತ್ತವೆ. ತಪ್ಪು ದಾರಿಯಲ್ಲಿ ಹೆಜ್ಜೆ ಇಟ್ಟ ಯುವಕರು, ಮಾದಕ ವಸ್ತುಗಳ ವ್ಯಸನಕ್ಕೆ ಸಿಲುಕಿದವರು, ಕ್ಷಣಿಕ ಆಮಿಷಕ್ಕೆ ಅಪರಾಧದತ್ತ ತಿರುಗಿದವರು, ಕುಟುಂಬದ ಬೆಂಬಲ ಕಳೆದುಕೊಂಡವರು… ಇಂತಹ ಹಲವು ಕಥೆಗಳು ಪೊಲೀಸ್ ಅಧಿಕಾರಿಗಳ ಕಣ್ಣೆದುರೇ ಹಾದುಹೋಗುತ್ತವೆ.

ರೀನಾ ಸುವರ್ಣ ಅವರು ತಮ್ಮ ಕಾರ್ಯಾಚರಣೆಗಳ ಅನುಭವವನ್ನೇ ಯುವಜನರಿಗೆ ಎಚ್ಚರಿಕೆಯ ಪಾಠವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ‘ತಪ್ಪು ಹೆಜ್ಜೆ ಇಟ್ಟರೆ ಬದುಕು ಯಾವ ಹಾದಿಗೆ ತಲುಪಬಹುದು’ ಎಂಬುದನ್ನು ಪ್ರಕರಣಗಳ ಹಿನ್ನೆಲೆಯ ಮೂಲಕ ವಿವರಿಸುತ್ತಾರೆ. ಅಪರಾಧವನ್ನು ತಡೆಯುವುದಕ್ಕಿಂತಲೂ, ಅಪರಾಧದತ್ತ ಯುವಕರು ಸಾಗದಂತೆ ಮಾಡುವುದೇ ದೊಡ್ಡ ಸಾಮಾಜಿಕ ಕಾರ್ಯ ಎಂಬ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ. ಅವರ ಉಪನ್ಯಾಸಗಳಿಗೆ ಯುವಜನರಿಂದ ವಿಶೇಷ ಸ್ಪಂದನೆ ದೊರೆಯುತ್ತಿದೆ. ಪೊಲೀಸ್ ಇಲಾಖೆಯ ಹೊರತಾಗಿಯೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಮಹಿಳಾ ಸಮುದಾಯ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಯುವಜನರಿಗೆ ದಾರಿದೀಪವಾಗುವ ರೀತಿಯಲ್ಲಿ ಅವರು ನೀಡುತ್ತಿರುವ ಉಪನ್ಯಾಸಗಳನ್ನು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಸೇರಿದಂತೆ ಹಲವರು ಶ್ಲಾಘಿಸಿರುವುದೂ ಗಮನಾರ್ಹ.

ಕಾರ್ಯಾಚರಣೆಗಳಲ್ಲಿ ಮುಂಚೂಣಿ:

ರೀನಾ ಸುವರ್ಣ ಅವರ ಪೊಲೀಸ್ ಸೇವೆಯ ಮತ್ತೊಂದು ಪ್ರಮುಖ ಅಂಶವೆಂದರೆ ಅಪರಾಧ ಜಾಲಗಳ ವಿರುದ್ಧದ ಕಾರ್ಯಾಚರಣೆ.
2026ರಲ್ಲಿ ವೈಟ್‌ಫೀಲ್ಡ್ ಉಪವಿಭಾಗದಲ್ಲಿ ‘ಆಪರೇಷನ್ ಮುಕ್ತ’ ಕಾರ್ಯಾಚರಣೆಯಡಿ ಅಕ್ರಮ ವಲಸಿಗರ ಪತ್ತೆಗೆ ನಡೆದ ಶೋಧದಲ್ಲಿ ಅವರು ತಂಡದ ನೇತೃತ್ವ ವಹಿಸಿದ್ದರು. ವೈಟ್‌ಫೀಲ್ಡ್, ಕಾಡುಗೋಡಿ, ಮಹದೇವಪುರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪರಿಶೀಲನೆ ನಡೆಸಲಾಗಿತ್ತು.

ಅಷ್ಟೇ ಅಲ್ಲ, ಮನೆಗಳ್ಳತನ, ವಾಹನ ಕಳ್ಳತನ ಹಾಗೂ ಮದುವೆ ಮಂಟಪಗಳಲ್ಲಿನ ಕಳ್ಳತನ ಪ್ರಕರಣಗಳ ತನಿಖೆಯಲ್ಲಿಯೂ ಅವರ ನೇತೃತ್ವದ ತಂಡಗಳು ಗಮನ ಸೆಳೆದಿವೆ. ಅವಲಹಳ್ಳಿ ಠಾಣೆ ವ್ಯಾಪ್ತಿಯ ಪ್ರಕರಣವೊಂದರಲ್ಲಿ ₹81 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮದುವೆ ಮಂಟಪಗಳನ್ನು ಗುರಿಯಾಗಿಸಿಕೊಂಡಿದ್ದ ಆರೋಪಿಯಿಂದ ₹47.60 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಮೊಬೈಲ್ ಕಳ್ಳತನದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲೂ ವೈಟ್‌ಫೀಲ್ಡ್ ವಿಭಾಗದ ಪೊಲೀಸರು ಗಮನಾರ್ಹ ಸಾಧನೆ ಮಾಡಿದ್ದಾರೆ. ವಿವಿಧ ಠಾಣಾ ವ್ಯಾಪ್ತಿಗಳಿಂದ ಕಳವಾಗಿದ್ದ ₹2.70 ಕೋಟಿ ಮೌಲ್ಯದ 1,119 ಮೊಬೈಲ್‌ಗಳನ್ನು ಮರುಸ್ವಾಧೀನಪಡಿಸಿಕೊಳ್ಳಲಾಗಿದೆ. ಮಹದೇವಪುರ ವ್ಯಾಪ್ತಿಯಲ್ಲಿನ ವಾಹನ ಕಳ್ಳತನ ಪ್ರಕರಣಗಳ ತನಿಖೆಯಲ್ಲಿ ಸುಮಾರು 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ರೌಡಿಗಳಿಂದ ಡ್ರಗ್ಸ್ ಜಾಲದವರೆಗೆ..!

ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರೌಡಿ ಹಿನ್ನೆಲೆಯುಳ್ಳವರ ಚಟುವಟಿಕೆಗಳ ಮೇಲೂ ನಿಗಾ ಇಟ್ಟಿದ್ದಾರೆ. 2026ರ ಜುಲೈನಲ್ಲಿ ವೈಟ್‌ಫೀಲ್ಡ್ ಉಪವಿಭಾಗದಲ್ಲಿ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 80ಕ್ಕೂ ಹೆಚ್ಚು ರೌಡಿ ಹಿನ್ನೆಲೆಯ ವ್ಯಕ್ತಿಗಳು, 25 ಎಂಒಬಿ ಆರೋಪಿಗಳು ಹಾಗೂ 29 ‘ಟ್ರಬಲ್‌ಮಾಂಗರ್ಸ್‌’ಮನೆಗಳನ್ನು ಪರಿಶೀಲಿಸಿ, ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿರುವಂತೆ ಎಚ್ಚರಿಕೆ ನೀಡಿರುವ ಸುದ್ದಿ ಸಂಚಲನ ಸೃಷ್ಟಿಸಿತ್ತು.

ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆಯಲ್ಲೂ ರೀನಾ ಸುವರ್ಣ ಅವರ ತಂಡ ಪ್ರಶಂಸಾರ್ಹ ಕೆಲಸ ಮಾಡಿದೆ ಎಂದು ಪೊಲೀಸ್ ಆಯುಕ್ತರೇ ಶಹಬ್ಬಾಸ್ ಗಿರಿ ನೀಡಿದ್ದರು. 2023ರಲ್ಲಿ ಅಂತಾರಾಜ್ಯ ಗಾಂಜಾ ಜಾಲದ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ 1,500 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದ್ದು, ಅದರ ಮೌಲ್ಯ ಸುಮಾರು ₹12 ಕೋಟಿ.
2020ರಲ್ಲಿಯೂ ಜೆ.ಸಿ.ನಗರ ಉಪವಿಭಾಗದಲ್ಲಿ ಮಾದಕ ವಸ್ತು ಪೂರೈಕೆ ಜಾಲದ ವಿರುದ್ಧ ನಡೆದ ಕಾರ್ಯಾಚರಣೆಗಳಲ್ಲಿ ಅವರ ಮಾರ್ಗದರ್ಶನದಲ್ಲಿ ತಂಡಗಳು ಕಾರ್ಯನಿರ್ವಹಿಸಿದ್ದವು.

ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಸಿಸಿಬಿ ಎಸಿಪಿಯಾಗಿದ್ದ ರೀನಾ ಸುವರ್ಣ ಅವರ ಪಾತ್ರ ಮಹತ್ವದ್ದಾಗಿತ್ತು. ಎನ್‌ಐಎ ಜತೆಗಿನ ಜಂಟಿ ಕಾರ್ಯಾಚರಣೆಯಲ್ಲಿ ಅವರು ಭಾಗವಹಿಸಿದ್ದರು.
ಪಿಎಫ್‌ಐ ಕಾರ್ಯಕರ್ತರ ಬಂಧನ ಪ್ರಕರಣದಲ್ಲೂ ಎನ್‌ಐಎ ಜತೆ ಸಿಸಿಬಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ರೀನಾ ಸುವರ್ಣ ಭಾಗಿಯಾಗಿದ್ದರು. ಸವಾಲಿನ ಪ್ರಕರಣಗಳ ತನಿಖೆ ಹಾಗೂ ಕಾರ್ಯಾಚರಣೆಯಲ್ಲಿ ಅವರ ಕಾರ್ಯವೈಖರಿ ಪ್ರಶಂಸೆಗೆ ಪಾತ್ರವಾಗಿದೆ.

ಸಂಕಷ್ಟದಲ್ಲಿ ಖಾಕಿಯ ಮಾನವೀಯ ಮುಖ; ಆಕ್ಸಿಜನ್ ಸೋರಿಕೆ ವೇಳೆ ಸಿನಿಮೀಯ ಮಾದರಿಯಲ್ಲಿ 19 ಜೀವ ಉಳಿಸಿದ ನಾರಿ:

ಪೊಲೀಸ್ ಕಾರ್ಯಾಚರಣೆಯ ಕಠಿಣ ಮುಖದ ಜತೆಗೆ ರೀನಾ ಸುವರ್ಣ ಅವರ ಮಾನವೀಯ ಮುಖವೂ ಹಲವು ಸಂದರ್ಭಗಳಲ್ಲಿ ಕಾಣಿಸಿಕೊಂಡಿದೆ. ಕೊರೊನಾ ಸಂಕಷ್ಟದ ದಿನಗಳಲ್ಲಿ, ಜನರು ಮನೆಯಿಂದ ಹೊರಬರಲು ಹೆದರುತ್ತಿದ್ದ ಸಂದರ್ಭದಲ್ಲಿ, ಆಸ್ಪತ್ರೆಯೊಂದರಲ್ಲಿ ಆಮ್ಲಜನಕದ ಸಮಸ್ಯೆ ಉಂಟಾದಾಗ ರೀನಾ ಸುವರ್ಣ ತುರ್ತಾಗಿ ಸ್ಪಂದಿಸಿ ಸುಮಾರು 19 ರೋಗಿಗಳ ಜೀವ ಉಳಿಸಿದರು. 2021ರ ಮೇ 12ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಬಳಿಯ ಶ್ರೇಯಸ್ ಆಸ್ಪತ್ರೆಯಲ್ಲಿ ಮಧ್ಯರಾತ್ರಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಿಂದ ಆತಂಕ ಸೃಷ್ಟಿಯಾಗಿತ್ತು. ಮಾಹಿತಿ ತಿಳಿದ ತಕ್ಷಣ ಜೆ.ಸಿ.ನಗರ ಉಪವಿಭಾಗದ ಎಸಿಪಿ ರೀನಾ ಸುವರ್ಣ ಸ್ಥಳಕ್ಕೆ ಧಾವಿಸಿದರು. ಆಸ್ಪತ್ರೆ ಬೇರೆ ಉಪವಿಭಾಗ ವ್ಯಾಪ್ತಿಯಲ್ಲಿದ್ದರೂ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವೆಂಟಿಲೇಟರ್‌ನಲ್ಲಿದ್ದ ಸುಮಾರು 19 ರೋಗಿಗಳ ಜೀವ ಉಳಿಸಿದ್ದರು.

ಆಸ್ಪತ್ರೆ ಮತ್ತೊಂದು ಉಪವಿಭಾಗದಲ್ಲಿದ್ದರೂ ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ತೆರಳಿದ ಅವರು, ಅಗತ್ಯ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆಗೊಳಿಸಲು ವಿವಿಧ ಆಸ್ಪತ್ರೆಗಳು ಹಾಗೂ ನೆರವು ನೀಡುವ ತಂಡಗಳೊಂದಿಗೆ ಸಂಪರ್ಕ ಸಾಧಿಸಿದ್ದರು. ಈ ಪ್ರಯತ್ನದಿಂದ ಹಲವು ರೋಗಿಗಳಿಗೆ ತುರ್ತು ನೆರವು ದೊರೆತಿತ್ತು.
ಅದೇ ಕೊರೊನಾ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ನಿರಾಶ್ರಿತರು ಹಾಗೂ ಅಸಹಾಯಕರಿಗೆ ಆಹಾರ ಒದಗಿಸುವ ಕೆಲಸದಲ್ಲಿಯೂ ಅವರು ತೊಡಗಿಕೊಂಡಿದ್ದರು.

ಇನ್ನೊಂದೆಡೆ, ಕೊರೊನಾ ಕಾಲದಲ್ಲೇ ನಕಲಿ ರೆಮ್‌ಡಿಸಿವಿರ್ ಔಷಧಿ ಮಾರಾಟದ ಆರೋಪದ ಪ್ರಕರಣವನ್ನು ಪೊಲೀಸರು ಭೇದಿಸಿದ್ದರು. ರೋಗಿಗಳ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದ ಜಾಲದ ವಿರುದ್ಧ ನಡೆದ ತನಿಖೆಯಲ್ಲಿ ವೈದ್ಯಕೀಯ ಕ್ಷೇತ್ರದವರೂ ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು.

ತನಿಖೆಯ ಜಾಡಿನಿಂದ ಕೋಟಿ ಮೌಲ್ಯದ ದಾಖಲೆಗಳವರೆಗೆ..

2023ರ ಚೈತ್ರಾ ಕುಂದಾಪುರ ಪ್ರಕರಣದ ತನಿಖೆಯಲ್ಲಿಯೂ ಎಸಿಪಿ ರೀನಾ ಸುವರ್ಣ ನೇತೃತ್ವದ ಸಿಸಿಬಿ ತಂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿತ್ತು. ತನಿಖೆಯ ಭಾಗವಾಗಿ ಉಡುಪಿಯಲ್ಲಿ ಶೋಧ ನಡೆಸಿ ಆಸ್ತಿ ದಾಖಲೆಗಳು, ಚಿನ್ನಾಭರಣ ಹಾಗೂ ನಗದನ್ನು ರೀನಾ ಸುವರ್ಣ ಪತ್ತೆಹಚ್ಚಿದ್ದರು.

ಹೀಗೆ ಪ್ರಕರಣದಿಂದ ಪ್ರಕರಣಕ್ಕೆ ಸಾಗುವ ಪೊಲೀಸ್ ಸೇವೆಯಲ್ಲಿ ರೀನಾ ಸುವರ್ಣ ಅವರಿಗೆ ಸಿಕ್ಕಿರುವ ಅನುಭವವೇ ಯುವಜನರೊಂದಿಗೆ ನಡೆಸುವ ಸಂವಾದದ ಬಂಡವಾಳವಾಗಿದೆ. ಅಪರಾಧಿಯನ್ನು ಹಿಡಿಯುವುದು ಪೊಲೀಸರ ಕರ್ತವ್ಯ. ಆದರೆ ಅಪರಾಧದತ್ತ ಹೆಜ್ಜೆ ಇಡುವ ಮುನ್ನವೇ ಒಬ್ಬ ಯುವಕನನ್ನು ತಡೆಯುವುದು ಸಮಾಜದ ಮೇಲಿನ ಇನ್ನೂ ದೊಡ್ಡ ಸೇವೆ. ಬಹುಶಃ ಇದೇ ಕಾರಣಕ್ಕೆ ರೀನಾ ಸುವರ್ಣ ಅವರ ಮಾತುಗಳು ಯುವಜನರಿಗೆ ಕೇವಲ ಪೊಲೀಸ್ ಅಧಿಕಾರಿಯ ಉಪದೇಶವಾಗಿ ಕಾಣಿಸುವುದಿಲ್ಲ; ಬದುಕನ್ನು ಅರಿತುಕೊಂಡ ಹಿರಿಯರ ಕಾಳಜಿಯ ಮಾತುಗಳಂತೆ ತಲುಪುತ್ತವೆ.

ರೌಡಿಗಳ ಅಡ್ಡೆಗೆ ತೆರಳುವ ಅದೇ ಅಧಿಕಾರಿ, ಮತ್ತೊಂದು ದಿನ ವಿದ್ಯಾರ್ಥಿಗಳ ಮುಂದೆ ನಿಂತು ‘ನಿಮ್ಮ ಬದುಕಿನ ದಿಕ್ಕು ನಿಮ್ಮ ಕೈಯಲ್ಲಿದೆ’ ಎಂದು ಹೇಳುತ್ತಾರೆ. ಖಾಕಿಯ ಕಠಿಣತೆ ಮತ್ತು ಮಾನವೀಯತೆಯ ಈ ಎರಡು ಮುಖಗಳ ಸಮನ್ವಯವೇ ರೀನಾ ಸುವರ್ಣ ಅವರ ಸೇವಾ ಪಯಣವನ್ನು ವಿಭಿನ್ನವಾಗಿಸುತ್ತದೆ. ಅವರ ಪೊಲೀಸ್ ಸೇವೆ, ಕಾರ್ಯಾಚರಣೆಗಳು ಮತ್ತು ಸಾಮಾಜಿಕ ಕಾಳಜಿಗೆ ವಿವಿಧ ಸಂಘ ಸಂಸ್ಥೆಗಳಿಂದ ಪ್ರಶಂಸೆ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರದ 2024ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೂ ಅವರು ಆಯ್ಕೆಯಾಗಿದ್ದರು.

ಖಾಕಿ ಎಂದರೆ ಕೇವಲ ಕಾನೂನಿನ ಬಲವಲ್ಲ; ಕೆಲವೊಮ್ಮೆ ಅದು ತಪ್ಪು ದಾರಿಯಲ್ಲಿರುವವರನ್ನು ಹಿಂದಕ್ಕೆ ಕರೆತರುವ ಕೈಯೂ ಹೌದು. ರೀನಾ ಸುವರ್ಣ ಅವರ ಸೇವಾ ಕಥನದಲ್ಲಿ ಆ ಎರಡೂ ಮುಖಗಳು ಕಾಣಿಸುತ್ತವೆ.

Author

ANU News

Follow Me
Other Articles
Previous

Bigg Boss Kannada Season 13: Meet the 16 contestants who made a grand entry into the house

Next

A police officer who drew attention as a ‘teacher’; On Teachers’ Day, the story of K’taka ACP Reena Suvarna

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Drought-hit taluk list: BJP accuses Karnataka govt of discrimination against farmers
    • ಬರ ತಾಲೂಕುಗಳ ಘೋಷಣೆಯಲ್ಲಿ ತಾರತಮ್ಯ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ
    • Emphasise values that unite rather than divide: Mohan Bhagwat
    • ವಿಭಜಿಸುವುದಕ್ಕಿಂತ ಒಗ್ಗೂಡಿಸುವ ಮೌಲ್ಯಗಳಿಗೆ ಒತ್ತು ನೀಡಿ: ಮೋಹನ್ ಭಾಗವತ್
    • APNIC 62 in Mumbai to focus on AI, cybersecurity and future-ready internet
    Copyright 2026 — ANU News. All rights reserved. Blogsy WordPress Theme