ಗಣೇಶ ಮೆರವಣಿಗೆ: ಪೊಲೀಸ್ ಇನ್ಸ್ಪೆಕ್ಟರ್ಗೆ ಕಾನೂನು ರೀತ್ಯ ಉತ್ತರ ಕೊಡುತ್ತೇನೆ: ಯತ್ನಾಳ್
ಬೆಂಗಳೂರು: ಗಣೇಶ ಮೆರವಣಿಗೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಮೈಸೂರು ಜಿಲ್ಲೆಯ ಟಿ. ನರಸೀಪುರ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ್ ಅವರಿಗೆ ಕಾನೂನು ರೀತ್ಯ ಉತ್ತರ ನೀಡುವುದಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ್ ನೀಡಿರುವ ಎನ್ನಲಾದ ಎಚ್ಚರಿಕೆಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಯತ್ನಾಳ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟಿ. ನರಸೀಪುರದಲ್ಲಿ ಗಣೇಶ ಪ್ರತಿಷ್ಠಾಪಿಸುವ ಯುವಕ ಸಂಘಗಳಿಗೆ ಮಸೀದಿ ಸಮೀಪದ ರಸ್ತೆಯಲ್ಲಿ ಮೆರವಣಿಗೆ ನಡೆಸಬಾರದು ಎಂದು ಪೊಲೀಸ್ ಇನ್ಸ್ಪೆಕ್ಟರ್ ಹೇಳಿದ್ದಾರೆ ಎನ್ನುವುದನ್ನು ಖಂಡಿಸುವುದಾಗಿ ಯತ್ನಾಳ್ ತಿಳಿಸಿದ್ದಾರೆ. ಬಹುಸಂಖ್ಯಾತ ಹಿಂದೂ ದೇಶದಲ್ಲಿ ಗಣೇಶ ಮೆರವಣಿಗೆ ನಡೆಸಲು ಪೊಲೀಸ್ ಅನುಮತಿ ಪಡೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವುದು ಹಾಸ್ಯಾಸ್ಪದ ಎಂದು ಅವರು ಟೀಕಿಸಿದ್ದಾರೆ.

‘ಪೊಲೀಸರ ಕೆಲಸ ಕಾನೂನು ಸುವ್ಯವಸ್ಥೆ ಕಾಪಾಡುವುದು’
ವಿನಾಯಕ ಚೌತಿ ರಾಷ್ಟ್ರೀಯ ಹಬ್ಬವಾಗಿದ್ದು, ಹಿಂದೂಗಳ ಒಗ್ಗಟ್ಟನ್ನು ಸಾರುವ ಹಬ್ಬವಾಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ಭಾರತೀಯರನ್ನು ಒಗ್ಗೂಡಿಸುವಲ್ಲಿ ಈ ಹಬ್ಬ ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ಮರೆಯಬಾರದು ಎಂದು ಯತ್ನಾಳ್ ಹೇಳಿದ್ದಾರೆ.
ಗಣೇಶ ಮೆರವಣಿಗೆ ಸಾಗುವ ಮಾರ್ಗದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಕರ್ತವ್ಯ. ಆದರೆ, ಅನಗತ್ಯ ನಿಯಮಗಳು ಅಥವಾ ಉಪದೇಶಗಳನ್ನು ನೀಡಬಾರದು ಎಂದು ಅವರು ಹೇಳಿದ್ದಾರೆ. ಇಲಾಖೆಯ ಅಸಮರ್ಥತೆಯನ್ನು ಗಣೇಶೋತ್ಸವ ಸಂಘಟನೆಗಳ ಮೇಲೆ ಹೇರಬಾರದು ಎಂದೂ ಆಕ್ಷೇಪಿಸಿದ್ದಾರೆ.
‘ದಬ್ಬಾಳಿಕೆ ಮಾಡಿದರೆ ಕಾನೂನು ಹೋರಾಟ’
ಸ್ವಂತ ಸಂಪನ್ಮೂಲದಿಂದ ಹಣ ಸಂಗ್ರಹಿಸಿ ಗಣೇಶೋತ್ಸವ ಆಯೋಜಿಸುವ ಯುವಕರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಅತಾರ್ಕಿಕ ನಿಯಮಗಳನ್ನು ಹೇರಿದರೆ ಕಾನೂನು ರೀತ್ಯ ಉತ್ತರ ನೀಡುವುದಾಗಿ ಯತ್ನಾಳ್ ಎಚ್ಚರಿಸಿದ್ದಾರೆ.
ಯುವಕರ ಮೇಲೆ ಒತ್ತಡ ಹೇರುವ ಬದಲು ಪೊಲೀಸರು ಕಾನೂನು ಸುವ್ಯವಸ್ಥೆ ಬಿಗಿಗೊಳಿಸುವತ್ತ ಗಮನಹರಿಸಬೇಕು. ಗಣೇಶೋತ್ಸವವನ್ನು ಸಂಭ್ರಮ, ಸಡಗರ ಮತ್ತು ವಿಜೃಂಭಣೆಯಿಂದ ಆಚರಿಸಬೇಕು. ಸುರಕ್ಷತೆ ಹಾಗೂ ಭಕ್ತಿಭಾವವೇ ಪ್ರಮುಖ ಮಾನದಂಡವಾಗಿರಬೇಕು ಎಂದು ಅವರು ಹೇಳಿದ್ದಾರೆ.