Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಎತ್ತಿನಹೊಳೆ ಕಾಮಗಾರಿಗೆ ಅಕ್ಟೋಬರ್ ಗಡುವು ವಿಳಂಬವಾದರೆ ಕಠಿಣ ಕ್ರಮದ ಎಚ್ಚರಿಕೆ

By ANU News
September 17, 2026 2 Min Read
0

ತುಮಕೂರು: ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆಯನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಗುರುವಾರ ತಿಪಟೂರು ಸಮೀಪದ ಚೌಡ್ಲಪುರದ ಪ್ಯಾಕೇಜ್-18 ಹಾಗೂ ತಿಪಟೂರು ಬೈಪಾಸ್ ಬಳಿ ನಡೆಯುತ್ತಿರುವ ಎಲಿವೇಟೆಡ್ ಟ್ರಫ್ ಕಾಮಗಾರಿಗಳನ್ನು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಮತ್ತು ಅಧಿಕಾರಿಗಳಿಗೆ ಅಕ್ಟೋಬರ್ ಅಂತ್ಯದ ಗಡುವು ನೀಡಿದ ಸಚಿವರು, ಯಾವುದೇ ಕಾರಣಕ್ಕೂ ನೆಪಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಕಾಲುನೋವು ಲೆಕ್ಕಿಸದೆ ಪರಿಶೀಲನೆ

ಕಾಮಗಾರಿಯ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಿದ ಸಚಿವರು, ಗುಡ್ಡಗಾಡು ಹಾಗೂ ಕಡಿದಾದ ರಸ್ತೆಯಲ್ಲಿ ಇಲಾಖೆಯ ಬೊಲೆರೊ ಜೀಪ್‌ನಲ್ಲಿ ಸಂಚರಿಸಿದರು. ಬಳಿಕ ಕಾಲುನೋವಿನ ನಡುವೆಯೂ ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ತೆರಳಿ, ಚೌಡ್ಲಪುರದ 127ರಿಂದ 137 ಕಿ.ಮೀ. ವ್ಯಾಪ್ತಿಯ ಕಾಮಗಾರಿಯ ವಿವಿಧ ಹಂತಗಳನ್ನು ಪರಿಶೀಲಿಸಿದರು.

ಪ್ಯಾಕೇಜ್-18ಕ್ಕೆ ಶೇ.86ರಷ್ಟು ಪ್ರಗತಿ

ಚೌಡ್ಲಪುರ ಭಾಗದಲ್ಲಿ ಭೂಸ್ವಾಧೀನಕ್ಕೆ ಸಂಬಂಧಿಸಿದ ದಾಖಲೆಗಳ ಕೊರತೆಯಿಂದ ಕಳೆದ ಎರಡು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಇದೀಗ ಎಲ್ಲ ತೊಡಕುಗಳನ್ನು ನಿವಾರಿಸಿ ಕಾಮಗಾರಿ ವೇಗವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದರು.

ಈ ಭಾಗದಲ್ಲಿ 22 ಮೀಟರ್ ಆಳದ ಡೀಪ್ ಕಟ್ ನಿರ್ಮಿಸಿ ಲೈನಿಂಗ್ ಕಾಮಗಾರಿ ನಡೆಸಲಾಗುತ್ತಿದೆ. ಹೆದ್ದಾರಿ ಬಳಿ ಕಟ್ ಆ್ಯಂಡ್ ಕವರ್ ಕಾಮಗಾರಿಯೂ ನಡೆಯುತ್ತಿದೆ. ₹606 ಕೋಟಿ ವೆಚ್ಚದ ಪ್ಯಾಕೇಜ್‌ನಲ್ಲಿ ಈಗಾಗಲೇ ಶೇ.86ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ದಿನದ 22 ಗಂಟೆಗಳ ಕಾಲ ಕಾಮಗಾರಿ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.

ತುಮಕೂರಿನವರೆಗೆ ಯಾವುದೇ ಪ್ರಮುಖ ಅಡೆತಡೆಗಳಿಲ್ಲದ ಹಿನ್ನೆಲೆಯಲ್ಲಿ ಅಕ್ಟೋಬರ್‌ನಲ್ಲೇ ಈ ಭಾಗದ ಕಾಮಗಾರಿ ಪೂರ್ಣಗೊಳಿಸುವಂತೆ ಚಲುವರಾಯಸ್ವಾಮಿ ಸೂಚಿಸಿದರು.

ಎಲಿವೇಟೆಡ್ ಟ್ರಫ್‌ಗೆ ಕಟ್ಟುನಿಟ್ಟಿನ ಗಡುವು

ತಿಪಟೂರು ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಮೇಲ್ಭಾಗದಲ್ಲಿ ಎತ್ತಿನಹೊಳೆ ನೀರು ಹರಿಸಲು ನಿರ್ಮಿಸುತ್ತಿರುವ ಎಲಿವೇಟೆಡ್ ಟ್ರಫ್ ಕಾಮಗಾರಿಯನ್ನೂ ಸಚಿವರು ಪರಿಶೀಲಿಸಿದರು. ಕಳೆದ ಮೂರು ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಅಕ್ಟೋಬರ್ ಅಂತ್ಯದೊಳಗೆ ಕಾಮಗಾರಿ ಕಡ್ಡಾಯವಾಗಿ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು. ಮತ್ತೆ ವಿಳಂಬವಾದರೆ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ನೇರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

ಪರಿಶೀಲನೆ ವೇಳೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ, ತಿಪಟೂರು ಶಾಸಕ ಷಡಕ್ಷರಿ ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Author

ANU News

Follow Me
Other Articles
Previous

Kannada school reopens in Qatar with renewed focus on language, culture

Next

Etthinahole works get October deadline as Cheluvarayaswamy warns contractors

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Modi is a ‘blessing from God’ for India, says CT Ravi
    • ಭಾರತಕ್ಕೆ ಮೋದಿ ಭಗವಂತನ ವರಪ್ರಸಾದವಾಗಿ ಬಂದವರು: ಸಿ.ಟಿ. ರವಿ
    • ಬಿ.ಎಡ್‌ ಶಿಕ್ಷಕರಿಗೆ 6 ತಿಂಗಳ ಬ್ರಿಡ್ಜ್ ಕೋರ್ಸ್: ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪಾಠ ಬೋಧನಾ ಕೌಶಲ್ಯ ಬಲಪಡಿಸಲು ಹೊಸ ತರಬೇತಿ
    • Pralhad Joshi launches six-month bridge course for BEd primary teachers
    • TRAI July drive test: Jio records fastest mobile download speed in Chennai
    Copyright 2026 — ANU News. All rights reserved. Blogsy WordPress Theme