‘ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ’; ಬಿ.ಕೆ.ಹರಿಪ್ರಸಾದ್
ಬೆಂಗಳೂರು: “ನಾನು ಹಿಂದೂ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಆದರೆ ನಾನು ಪಾಲಿಸುವ ಹಿಂದು ಧರ್ಮ ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ನಾರಾಯಣಗುರು, ಕನಕದಾಸ ಹಾಗೂ ಬಸವಣ್ಣ ಅವರು ಬೋಧಿಸಿದ ಧರ್ಮವೇ ಹೊರತು, ಗೋಲ್ವಾಲ್ಕರ್, ಗೋಡ್ಸೆ ಮತ್ತು ಹೆಡಗೆವಾರ್ ಪ್ರತಿಪಾದಿಸಿದ ಹಿಂದೂ ಧರ್ಮವಲ್ಲ” ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿ ಭಾರತ ಜೋಡೋ ಭವನದಲ್ಲಿ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. “ಬಿಜೆಪಿಯವರು ದೇಶವನ್ನು ಹಿಮ್ಮುಖ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ. ಜನರು ಅನಕ್ಷರಸ್ಥರಾಗಿದ್ದಷ್ಟು ಅಂಧಭಕ್ತರನ್ನು ಸೃಷ್ಟಿಸಲು ಸಾಧ್ಯವಾಗುತ್ತದೆ. ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ಪ್ರಯತ್ನ ನಡೆಯುತ್ತಿದೆ. ಜಾತಿ-ಧರ್ಮದ ಗಲಭೆಗಳಲ್ಲಿ ಜೈಲು ಸೇರುವವರು ದಲಿತರು ಮತ್ತು ಶೂದ್ರರೇ ಹೊರತು, ಲೂಟಿ ನಡೆಸುವವರು ಅಲ್ಲ” ಎಂದು ಆರೋಪಿಸಿದರು.

ದೇವಾಲಯಗಳ ಲೂಟಿ ಕುರಿತು ಮಾತನಾಡಿದ ಅವರು, “ದೇವರ ಬಗ್ಗೆ ನಮಗೆ ಪಾಠ ಮಾಡುವವರು ಮೊದಲು ತಮ್ಮ ಇತಿಹಾಸವನ್ನು ನೋಡಿಕೊಳ್ಳಬೇಕು” ಎಂದರು.
ಭಾರತದ ಬಹುತ್ವವೇ ದೇಶದ ಆತ್ಮ ಎಂದು ಹೇಳಿದ ಹರಿಪ್ರಸಾದ್, “ಭಾರತದಂತಹ ವೈವಿಧ್ಯಮಯ ರಾಷ್ಟ್ರ ಜಗತ್ತಿನಲ್ಲಿ ಮತ್ತೊಂದಿಲ್ಲ. ವಿವಿಧ ಧರ್ಮ, ಭಾಷೆ ಹಾಗೂ ಸಂಸ್ಕೃತಿಗಳನ್ನು ಒಳಗೊಂಡಿರುವ ಈ ದೇಶದಲ್ಲಿ ‘ಒಂದು ರಾಷ್ಟ್ರ, ಒಂದು ಧರ್ಮ, ಒಂದು ಶಿಕ್ಷಣ, ಒಬ್ಬ ನಾಯಕ’ ಎಂಬ ಪರಿಕಲ್ಪನೆಯನ್ನು ಜಾರಿಗೊಳಿಸಲು ಸಾಧ್ಯವಿಲ್ಲ” ಎಂದರು.
ಆರ್ಎಸ್ಎಸ್ ಮುಖಂಡ ರಾಮ್ ಮಾಧವ್ ವಿರುದ್ಧವೂ ಹಲವು ಆರೋಪಗಳನ್ನು ಮಾಡಿದರು. ಪಾಕಿಸ್ತಾನದ ಮಾಜಿ ಸೇನಾ ಅಧಿಕಾರಿಗಳೊಂದಿಗೆ ನಡೆದಿರುವುದಾಗಿ ಹೇಳಲಾದ ಸಭೆಗಳ ಕುರಿತು ಪ್ರಶ್ನೆಗಳನ್ನು ಎತ್ತಿದ ಅವರು, ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.
‘ಆಪರೇಷನ್ ಸಿಂಧೂರ್’ ಕುರಿತ ಚರ್ಚೆಯನ್ನು ಪ್ರಸ್ತಾಪಿಸಿದ ಹರಿಪ್ರಸಾದ್, ಕೇಂದ್ರ ಸರ್ಕಾರದ ಹೇಳಿಕೆಗಳಲ್ಲಿ ವೈರುಧ್ಯವಿದೆ ಎಂದರು. ಹುತಾತ್ಮ ಯೋಧರ ಕುರಿತು ಮಾಹಿತಿ ಬಹಿರಂಗಪಡಿಸದಿರುವುದಕ್ಕೂ ಪ್ರಶ್ನೆ ಎತ್ತಿದ ಅವರು, ದೇಶದ ಜನರಿಗೆ ಸತ್ಯ ತಿಳಿಯಬೇಕು ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಚಿವೆ ರಾಣಿ ಸತೀಶ್, ಕಿಮ್ಮನೆ ರತ್ನಾಕರ್, ಶಿವಣ್ಣ, ಮಾಜಿ ಸಂಸದ ಎಲ್. ಹನುಮಂತಯ್ಯ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.