ಭವಿಷ್ಯದ ಬಾಹ್ಯಾಕಾಶ ಯಾನಗಳಿಗೆ ಆದಿತ್ಯ-L1, ಚಂದ್ರಯಾನ-3 ಅಡಿಪಾಯ: ಕೇಂದ್ರ
ನವದೆಹಲಿ: ಭಾರತದ ಆದಿತ್ಯ-L1 ಹಾಗೂ ಚಂದ್ರಯಾನ-3 ಮಿಷನ್ಗಳು ಮಹತ್ವದ ವೈಜ್ಞಾನಿಕ ಸಾಧನೆಗಳನ್ನು ದಾಖಲಿಸಿದ್ದು, ದೇಶದ ಭವಿಷ್ಯದ ಬಾಹ್ಯಾಕಾಶ ಪರಿಶೋಧನಾ ಕಾರ್ಯಕ್ರಮಗಳಿಗೆ ಬಲವಾದ ಅಡಿಪಾಯ ಹಾಕಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ಕೇಂದ್ರ ಬಾಹ್ಯಾಕಾಶ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ಈ ಮಾಹಿತಿ ನೀಡಿದ್ದು, ಸೂರ್ಯ–ಭೂಮಿ L1 ಬಿಂದುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತದ ಮೊದಲ ಸೌರ ವೀಕ್ಷಣಾಲಯವಾದ ಆದಿತ್ಯ-L1, ಸೌರ ಸ್ಫೋಟಗಳು, ಕರೋನಲ್ ಮಾಸ್ ಎಜೆಕ್ಷನ್ (CME), ಬಾಹ್ಯಾಕಾಶ ಹವಾಮಾನ ಹಾಗೂ ಸೌರ ಜ್ವಾಲೆಗಳ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದೆ ಎಂದು ಹೇಳಿದ್ದಾರೆ. ಈ ಅಧ್ಯಯನಗಳು ಭವಿಷ್ಯದಲ್ಲಿ ಬಾಹ್ಯಾಕಾಶ ಹವಾಮಾನ ಮುನ್ಸೂಚನೆಗಳನ್ನು ಮತ್ತಷ್ಟು ನಿಖರಗೊಳಿಸಲು ನೆರವಾಗಲಿವೆ ಎಂದರು.

ಚಂದ್ರಯಾನ-3 ಕುರಿತು ಮಾತನಾಡಿದ ಸಚಿವರು, ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಇಳಿದ ವಿಶ್ವದ ಮೊದಲ ಮಿಷನ್ ಎಂಬ ಹೆಗ್ಗಳಿಕೆಯನ್ನು ಭಾರತ ಇನ್ನೂ ಉಳಿಸಿಕೊಂಡಿದೆ ಎಂದು ಹೇಳಿದರು. ChaSTE ಉಪಕರಣವು ಚಂದ್ರನ ಮೇಲ್ಮೈ ಕೆಳಗಿನ ತಾಪಮಾನದ ವಿಶ್ಲೇಷಣೆ ನಡೆಸಿದ್ದು, ಭೂಗತ ನೀರಿನ ಮಂಜುಗಡ್ಡೆಯ ಸಾಧ್ಯತೆ ಕುರಿತು ಹೊಸ ಮಾಹಿತಿಯನ್ನು ನೀಡಿದೆ. ಪ್ರಜ್ಞಾನ ರೋವರ್ ಚಂದ್ರನ ಮೇಲ್ಮೈಯಲ್ಲಿ ಮೆಗ್ನೀಸಿಯಮ್ ಸಮೃದ್ಧ ಖನಿಜಗಳನ್ನು ಪತ್ತೆಹಚ್ಚಿದ್ದು, ಚಂದ್ರನ ರಚನೆ ಕುರಿತ ವೈಜ್ಞಾನಿಕ ಊಹೆಗಳಿಗೆ ಬಲ ನೀಡಿದೆ.
ಇದಲ್ಲದೆ, RAMBHA-LP ಉಪಕರಣವು ಚಂದ್ರನ ಮೇಲ್ಮೈ ಸಮೀಪದ ಪ್ಲಾಸ್ಮಾವನ್ನು ಅಧ್ಯಯನ ಮಾಡಿದ್ದು, ILSA ಭೂಕಂಪಮಾಪಕವು 250ಕ್ಕೂ ಹೆಚ್ಚು ಭೂಕಂಪನ ಘಟನೆಗಳನ್ನು ದಾಖಲಿಸಿದೆ. ಈ ಸಂಶೋಧನೆಗಳು ಅಂತಾರಾಷ್ಟ್ರೀಯ ವೈಜ್ಞಾನಿಕ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದ್ದು, ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿವೆ.
ಆದಿತ್ಯ-L1 ಹಾಗೂ ಚಂದ್ರಯಾನ-3ರಿಂದ ಪಡೆದ ತಂತ್ರಜ್ಞಾನ ಮತ್ತು ಅನುಭವವು ವೀನಸ್ ಆರ್ಬಿಟರ್ ಮಿಷನ್, ಚಂದ್ರಯಾನ-4, ಚಂದ್ರಯಾನ-5/ಲುಪೆಕ್ಸ್ ಸೇರಿದಂತೆ ಭವಿಷ್ಯದ ಆಳವಾದ ಬಾಹ್ಯಾಕಾಶ ಯಾನಗಳಿಗೆ ನೆರವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.