
ಮರಾಠಿ ಭಾಷೆ ಹೆಸರಿನಲ್ಲಿ ಹಿಂಸಾಚಾರ ಬೇಡ: ‘ಮಹಾ’ ಜನತೆಗೆ ಸಿಎಂ ದೇವೇಂದ್ರ ಫಡ್ನವೀಸ್ ಕರೆ
ಮುಂಬೈ: ಮಹಾರಾಷ್ಟ್ರದಲ್ಲಿ ಮರಾಠಿ ಭಾಷೆ ಕಡ್ಡಾಯ ಬಳಕೆ ಕುರಿತು ಚರ್ಚೆಗಳು ತೀವ್ರಗೊಂಡಿರುವ ನಡುವೆ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಭಾಷಾ ಹೆಮ್ಮೆಯ ಹೆಸರಿನಲ್ಲಿ ಹಿಂಸಾಚಾರ ಅಥವಾ ತಾರತಮ್ಯವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ ದಿನದ ಅಂಗವಾಗಿ ಹುತಾತ್ಮ ಚೌಕ್ನಲ್ಲಿ ಮಾತನಾಡಿದ ಅವರು, “ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯ ಬಗ್ಗೆ ಹೆಮ್ಮೆ ಹೊಂದಬೇಕು. ಆದರೆ ಅದೇ ಹೆಸರಿನಲ್ಲಿ ಹಿಂಸೆ, ಬೆದರಿಕೆ ಅನ್ಯಾಯ” ಎಂದು ಹೇಳಿದರು. ರಾಜ್ಯದಲ್ಲಿ ವಾಸಿಸುವ ಎಲ್ಲರೂ ಮರಾಠಿ ಭಾಷೆಯನ್ನು ಕಲಿಯಬೇಕು ಎಂಬುದನ್ನು ಅವರು ಪುನರುಚ್ಚರಿಸಿದರು.
ರಿಕ್ಷಾ ಚಾಲಕರಿಗೆ ಮರಾಠಿ ಕಲಿಯುವಂತೆ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಉಂಟಾದ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಸರ್ಕಾರ ತರಬೇತಿ ಕಾರ್ಯಕ್ರಮ ರೂಪಿಸಿದೆ ಎಂದರು. ಪ್ರತಿಭಟನೆಗಳ ಹಿನ್ನೆಲೆ ಅನುಸರಣೆ ಗಡುವನ್ನು ಆಗಸ್ಟ್ ವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಇದೇ ವಿಚಾರದಲ್ಲಿ ರಾಜ್ ಠಾಕ್ರೆ ಮಾಡಿದ ಕಟುವಾದ ಟೀಕೆಗೆ ಪ್ರತಿಕ್ರಿಯಿಸಿದ ಫಡ್ನವೀಸ್, ಮಹಾರಾಷ್ಟ್ರ “ಸಂಕುಚಿತ ಮನೋಭಾವದ ರಾಜ್ಯವಲ್ಲ” ಎಂದು ಹೇಳಿದರು. “ವಲಸಿಗರು ಇಲ್ಲಿ ವಾಸಿಸಬಾರದು ಎಂಬ ಮನಸ್ಥಿತಿ ನಮ್ಮದಲ್ಲ” ಎಂದು ಅವರು ಸ್ಪಷ್ಟಪಡಿಸಿದರು.
“ಛತ್ರಪತಿ ಶಿವಾಜಿ ಮಹಾರಾಜ ನಮಗೆ ಕಲಿಸಿದ ಮಹಾರಾಷ್ಟ್ರ ಧರ್ಮವು ಎಲ್ಲರನ್ನು ಒಳಗೊಂಡಿರುತ್ತದೆ” ಎಂದು ಅವರು ಹೇಳಿದರು. ದೇಶದ ವಿವಿಧ ಭಾಗಗಳಲ್ಲಿ ಮರಾಠಿ ಜನರು ನೀಡುತ್ತಿರುವ ಕೊಡುಗೆಯನ್ನು ಅವರು ಹೆಮ್ಮೆಪಟ್ಟು ಉಲ್ಲೇಖಿಸಿದರು.
ಭಾಷೆಯನ್ನು ಬಲವಂತದಿಂದ ಹೇರುವುದನ್ನು ಖಂಡಿಸಿದ ಅವರು, “ಮರಾಠಿ ಸುಂದರ ಮತ್ತು ಸರಳ ಭಾಷೆ. ಅದನ್ನು ಪ್ರೀತಿಯಿಂದ ಕಲಿಸಬಹುದು” ಎಂದರು. ಎಂಎನ್ಎಸ್ನೊಂದಿಗೆ ಸಂಬಂಧಿಸಿದ “ಖಲ್-ಖತ್ಯಾಕ್” ಶೈಲಿಯ ರಾಜಕೀಯವನ್ನೂ ಅವರು ತೀವ್ರವಾಗಿ ಖಂಡಿಸಿದರು.