‘ಸಾಧನಾ ಸಮಾವೇಶ ಅಲ್ಲ, ವೈಫಲ್ಯೋತ್ಸವ’; ಕಾಂಗ್ರೆಸ್ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ
ಬೆಂಗಳೂರು: ತುಮಕೂರಿನಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶವನ್ನು ಬಿಜೆಪಿ ನಾಯಕ ಆರ್. ಅಶೋಕ್ ತೀವ್ರವಾಗಿ ಟೀಕಿಸಿದ್ದು, “ಇದು ಸಾಧನಾ ಸಮಾವೇಶವಲ್ಲ, ಕನ್ನಡಿಗರಿಗೆ ಬಗೆದ ದ್ರೋಹದ ಮಹಾಸಮಾವೇಶ” ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕವನ್ನು “ನಂ.1” ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಆದರೆ ಅಭಿವೃದ್ಧಿಯಲ್ಲಿ ಅಲ್ಲ, ಭ್ರಷ್ಟಾಚಾರ, ಬೆಲೆ ಏರಿಕೆ, ರೈತರ ಕಣ್ಣೀರು ಮತ್ತು ಯುವಕರ ನಿರಾಶೆಯಲ್ಲಿ ರಾಜ್ಯ ನಂ.1 ಆಗಿದೆ ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಅವರು, ದೇಶದ ಮಟ್ಟದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿದ್ದರೂ ಕರ್ನಾಟಕದಲ್ಲಿ ಮಾತ್ರ ಶೇ.22ಕ್ಕೂ ಹೆಚ್ಚು ಏರಿಕೆಯಾಗಿದೆ ಎಂದರು.
ಮುಡಾ, ವಾಲ್ಮೀಕಿ, KIADB, KPSC ಹಾಗೂ ನಕಲಿ ಚೆಕ್ ಹಗರಣಗಳನ್ನು ಉಲ್ಲೇಖಿಸಿದ ಅಶೋಕ್, “ಸರ್ಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಹಗರಣಗಳ ಕಾರ್ಖಾನೆ ನಡೆಸುತ್ತಿದೆಯೋ?” ಎಂದು ಪ್ರಶ್ನಿಸಿದರು.

ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರ ಮೇಲೆ ಆರ್ಥಿಕ ಹೊರೆ ಹಾಕಲಾಗಿದೆ ಎಂದು ಆರೋಪಿಸಿದ ಅವರು, ಹಾಲು, ವಿದ್ಯುತ್, ನೀರು, KSRTC ಬಸ್ ಟಿಕೆಟ್, ಆಸ್ತಿ ತೆರಿಗೆ, ಸ್ಟಾಂಪ್ ಡ್ಯೂಟಿ ಮತ್ತು ಕಸದ ಸುಂಕ ಸೇರಿದಂತೆ ಅನೇಕ ದರಗಳನ್ನು ಸರ್ಕಾರ ಹೆಚ್ಚಿಸಿದೆ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾಷಣ ಶೈಲಿಯನ್ನು ಟೀಕಿಸಿದ ಅಶೋಕ್, “ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ರೌಡಿಗಳ ಗ್ಯಾಂಗ್ ಆಡಳಿತವೋ ಎಂಬ ಅನುಮಾನ ಮೂಡುತ್ತಿದೆ” ಎಂದು ಹೇಳಿದರು.
KPSC ಪರೀಕ್ಷಾ ಅವ್ಯವಸ್ಥೆ, ಪ್ರಶ್ನೆಪತ್ರಿಕೆ ಗೊಂದಲ ಮತ್ತು ಅಭ್ಯರ್ಥಿಗಳಿಗೆ ಆಗಿರುವ ತೊಂದರೆಗಳನ್ನು ಉಲ್ಲೇಖಿಸಿದ ಅವರು, ಯುವಕರ ಭವಿಷ್ಯದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.
ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತ, ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಸೌಕರ್ಯ ಕೊರತೆ ಮತ್ತು ಔಷಧಿಗಳ ಅಭಾವವನ್ನು ಉಲ್ಲೇಖಿಸಿದ ಅಶೋಕ್, ಸರ್ಕಾರದ ದುರಾಡಳಿತದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
“ಜನರು ಅಭಿವೃದ್ಧಿ ಕೇಳಿದರೆ ಸರ್ಕಾರ ಜಾಹೀರಾತು ಕೊಟ್ಟಿದೆ. ಉದ್ಯೋಗ ಕೇಳಿದರೆ ಸುಳ್ಳು ಭರವಸೆ ನೀಡಿದೆ. ಉತ್ತಮ ಆಡಳಿತ ಕೇಳಿದರೆ ಭ್ರಷ್ಟಾಚಾರ ಮತ್ತು ಅರಾಜಕತೆ ನೀಡಿದೆ” ಎಂದು ಟೀಕಿಸಿದರು.
“ಕನ್ನಡಿಗರು ಮೌನವಾಗಿರಬಹುದು, ಆದರೆ ಮೂಕರಲ್ಲ. ಸರ್ಕಾರದ ಅಹಂಕಾರ ಮತ್ತು ಭ್ರಷ್ಟಾಚಾರಕ್ಕೆ ಜನರು ತಕ್ಕ ಉತ್ತರ ನೀಡುವ ದಿನ ದೂರವಿಲ್ಲ” ಎಂದು ಅಶೋಕ್ ಎಚ್ಚರಿಸಿದರು.