ಸೂರಜ್ ಹೆಗ್ಡೆ ನಿಧನ: ಕಾಂಗ್ರೆಸ್ಗೆ ಅಪಾರ ನಷ್ಟ ಎಂದ ಖರ್ಗೆ
ನವದೆಹಲಿ: ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕ ಖಾತರಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸೂರಜ್ ಹೆಗ್ಡೆ ಅವರು ತಮಿಳುನಾಡು ಮತ್ತು ಪುದುಚೇರಿಯ ಪಕ್ಷದ ಉಸ್ತುವಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಕರ್ನಾಟಕ ಕಾಂಗ್ರೆಸ್ನಲ್ಲಿಯೂ ವಿವಿಧ ಸಾಂಸ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸುವ ಮೂಲಕ ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸಂತಾಪ ಸಂದೇಶ ಹಂಚಿಕೊಂಡಿರುವ ಖರ್ಗೆ, ಸೂರಜ್ ಹೆಗ್ಡೆ ಅವರನ್ನು ಕಾಂಗ್ರೆಸ್ಗೆ ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸಿದ ಯುವ ಹಾಗೂ ಭರವಸೆಯ ನಾಯಕ ಎಂದು ಬಣ್ಣಿಸಿದ್ದಾರೆ.
“ಎಐಸಿಸಿ ಕಾರ್ಯದರ್ಶಿಯಾಗಿ ಪಕ್ಷಕ್ಕೆ ಅಪಾರ ಬದ್ಧತೆ ಮತ್ತು ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದ್ದ ಯುವ ನಾಯಕ ಸೂರಜ್ ಹೆಗ್ಡೆ ಅವರ ಅಕಾಲಿಕ ನಿಧನದ ಸುದ್ದಿ ತೀವ್ರ ಆಘಾತ ಮತ್ತು ದುಃಖ ಉಂಟುಮಾಡಿದೆ,” ಎಂದು ಖರ್ಗೆ ತಿಳಿಸಿದ್ದಾರೆ.

ತಮ್ಮ ಹದಿಹರೆಯದ ವಯಸ್ಸಿನಿಂದಲೇ ಸೂರಜ್ ಹೆಗ್ಡೆ ಅವರನ್ನು ತಿಳಿದಿದ್ದಾಗಿ ಹೇಳಿರುವ ಖರ್ಗೆ, ಅವರು ಪಕ್ಷದ ಸಂಘಟನೆಗೆ ಸಂಪೂರ್ಣವಾಗಿ ಸಮರ್ಪಿತರಾದ ನಾಯಕರಾಗಿ ಬೆಳೆದಿದ್ದನ್ನು ಕಂಡಿದ್ದೇನೆ ಎಂದು ಸ್ಮರಿಸಿದ್ದಾರೆ.
ಯುವ ಕಾಂಗ್ರೆಸ್ ಸಂಘಟನೆಯಲ್ಲಿ ಸೂರಜ್ ಹೆಗ್ಡೆ ನೀಡಿದ ಕೊಡುಗೆ ಮಹತ್ವದ್ದಾಗಿದ್ದು, ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸ್ ಅವರ ಮೌಲ್ಯಗಳು ಮತ್ತು ಪರಂಪರೆಯನ್ನು ಪ್ರಾಮಾಣಿಕತೆ ಹಾಗೂ ಬದ್ಧತೆಯಿಂದ ಮುಂದುವರಿಸಲು ಅವರು ಶ್ರಮಿಸಿದ್ದರು ಎಂದು ಖರ್ಗೆ ಹೇಳಿದ್ದಾರೆ.
“ಈ ದುಃಖದ ಸಮಯದಲ್ಲಿ ಅವರ ಕುಟುಂಬ ಸದಸ್ಯರು, ಸ್ನೇಹಿತರು ಹಾಗೂ ಬೆಂಬಲಿಗರೊಂದಿಗೆ ನಾನು ಇದ್ದೇನೆ. ಈ ಭರಿಸಲಾಗದ ನಷ್ಟವನ್ನು ಎದುರಿಸುವ ಶಕ್ತಿ ಮತ್ತು ಧೈರ್ಯವನ್ನು ದೇವರು ನೀಡಲಿ,” ಎಂದು ಅವರು ಸಂತಾಪ ಸೂಚಿಸಿದ್ದಾರೆ.
ಸೂರಜ್ ಹೆಗ್ಡೆ ಅವರ ನಿಧನಕ್ಕೆ ದೇಶದ ವಿವಿಧ ಭಾಗಗಳ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಕಂಬನಿ ಮಿಡಿದಿದ್ದು, ಅವರನ್ನು ಸಮರ್ಥ ಸಂಘಟಕ, ಪಕ್ಷನಿಷ್ಠ ನಾಯಕ ಮತ್ತು ಯುವಜನರ ಆಶಾಕಿರಣವಾಗಿ ಸ್ಮರಿಸಿದ್ದಾರೆ.