ಶಿರೂರು ಶಾಲೆಯ SSLC ಚಮತ್ಕಾರ: 35% ರಿಂದ 94%ಕ್ಕೆ ಜಿಗಿತ, ಗುರುವಿನ ಪಾದಕ್ಕೆ ಶಿರಬಾಗಿದ ಶಾಸಕ ಗುರುರಾಜ್ ಗಂಟಿಹೊಳೆ
ಉಡುಪಿ/ಬೈಂದೂರು: ಶಿರೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ SSLC ಫಲಿತಾಂಶ ಈ ಬಾರಿ ಅಚ್ಚರಿ ಮೂಡಿಸಿದೆ. ಕಳೆದ ವರ್ಷ ಕೇವಲ 35% ಫಲಿತಾಂಶಕ್ಕೆ ಸೀಮಿತವಾಗಿದ್ದ ಶಾಲೆ, ಈ ಬಾರಿ 94% ಫಲಿತಾಂಶ ಪಡೆದು ಹೊಸ ಇತಿಹಾಸ ನಿರ್ಮಿಸಿದೆ.
ಶಾಸಕ ಗುರುರಾಜ್ ಗಂಟಿಹೊಳೆಯ ನಿರಂತರ ಶಿಕ್ಷಣ ಕಾಳಜಿ & ಶಿಕ್ಷಕಿ ಜಯಂತಿ ಟೀಚರ್ ಶ್ರಮಕ್ಕೆ ಯಶಸ್ಸು ಸಿಕ್ಕಿದೆ. ಈ ಫಲಿತಾಂಶ ಸಾಧನೆಯ ಹಿಂದೆ ಪ್ರಾಂಶುಪಾಲೆ ಜಯಂತಿ ಟೀಚರ್ ಅವರ ಅಹರ್ನಿಶಿ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಮನೆ-ಮಠವನ್ನೇ ಬಿಟ್ಟು ಶಾಲೆಯ ಹತ್ತಿರವೇ ವಾಸ್ತವ್ಯ ಹೂಡಿದ ಅವರು, ಹಗಲಿರುಳು ವಿಶೇಷ ತರಗತಿಗಳನ್ನು ನಡೆಸಿ ಮಕ್ಕಳನ್ನು ಉತ್ತೇಜಿಸಿದ್ದಾರೆ.
ಫಲಿತಾಂಶ ಪ್ರಕಟವಾದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾವುಕರಾದ ಕ್ಷಣಗಳು ಎಲ್ಲರ ಮನಸೆಳೆಯಿತು. ಜಯಂತಿ ಟೀಚರ್ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ಅವರು, ಶಿಕ್ಷಕರ ತ್ಯಾಗ ಮತ್ತು ಶ್ರಮಕ್ಕೆ ಗೌರವ ಸಲ್ಲಿಸಿದರು.
ಕಳೆದ ವರ್ಷ ಫಲಿತಾಂಶ ಕುಸಿದಾಗ ಶಾಸಕರು ಶಿಕ್ಷಕರನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಆದರೆ, ಅದೇ ಟೀಕೆ ಈ ಬಾರಿ ಪ್ರೇರಣೆಯಾಗಿ ಮಾರ್ಪಟ್ಟಿದೆ. “ಅಂದು ನೀಡಿದ ಕಠಿಣ ಮಾತುಗಳ ಉದ್ದೇಶ ಇಂದಿನ ಈ ಯಶಸ್ಸು” ಎಂದು ಶಾಸಕ ಗಂಟಿಹೊಳೆ ಹೇಳಿದರು.
ಆಪ್ತತೆ, ಶಿಸ್ತು ಮತ್ತು ನಿರಂತರ ಪರಿಶ್ರಮ – ಈ ಮೂರು ಅಂಶಗಳ ಸಂಗಮವೇ ಶಿರೂರು ಶಾಲೆಯ ಯಶಸ್ಸಿನ ಮೂಲವಾಗಿದೆ. ಶಾಲೆ ಮತ್ತು ಜನಪ್ರತಿನಿಧಿಗಳ ಸಹಕಾರ ಇದ್ದರೆ ಸರ್ಕಾರಿ ಶಾಲೆಗಳೂ ಅದ್ಭುತ ಸಾಧನೆ ಮಾಡಬಹುದು ಎಂಬುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ.
ಟೀಕೆಗಳನ್ನು ಸವಾಲಾಗಿ ಸ್ವೀಕರಿಸಿದ ಶಿಕ್ಷಕರ ತಂಡ ಮತ್ತು ಕಾಳಜಿಯ ನಾಯಕತ್ವ – ಈ ಎರಡರ ಸಂಗಮದಿಂದ ಶಿರೂರು ಶಾಲೆ ಇಂದು ಯಶಸ್ಸಿನ ಶಿಖರವೇರಿದೆ.