ರಾಮಮಂದಿರ ಸಿಇಒ ಆಯ್ಕೆ ಪಾರದರ್ಶಕವಾಗಿ ನಡೆದಿದೆ: ಅಯೋಧ್ಯೆ ಟ್ರಸ್ಟ್ ಸ್ಪಷ್ಟನೆ
ಅಯೋಧ್ಯೆ: ರಾಮಮಂದಿರ ಸಂಕೀರ್ಣದ ಮೊದಲ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO) ಆಯ್ಕೆ ಪ್ರಕ್ರಿಯೆ ಪಾರದರ್ಶಕ ಹಾಗೂ ಅರ್ಹತೆ ಆಧಾರಿತವಾಗಿತ್ತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.
ಏರ್ ಮಾರ್ಷಲ್ ಜಿತೇಂದ್ರ ಮಿಶ್ರಾ (ನಿವೃತ್ತ) ಅವರು ಸಿಇಒ ಹುದ್ದೆಯ ಸಂದರ್ಶನಕ್ಕೆ ಹಾಜರಾಗಿರಲಿಲ್ಲ ಎಂಬ ವರದಿಗಳನ್ನು ಟ್ರಸ್ಟ್ ತಳ್ಳಿಹಾಕಿದೆ. ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸ್ವಾಮಿ ಗೋವಿಂದದೇವ್ ಗಿರಿ ಅವರ ಹೇಳಿಕೆಯಂತೆ, ಮಿಶ್ರಾ ಅವರು ಸಂದರ್ಶನಕ್ಕೆ ಹಾಜರಾಗಿರಲಿಲ್ಲ ಎಂಬುದು “ವಾಸ್ತವಾಂಶಕ್ಕೆ ವಿರುದ್ಧವಾದ ಮಾಹಿತಿ” ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ
ಜುಲೈ 6ರಂದು ರಚನೆಯಾದ ಆಯ್ಕೆ ಸಮಿತಿಗೆ ಒಟ್ಟು 5,585 ಅರ್ಜಿಗಳು ಸಲ್ಲಿಕೆಯಾಗಿದ್ದವು. ಎಐ ನೆರವಿನ ತಂತ್ರಜ್ಞಾನ ಹಾಗೂ ಹಸ್ತಚಾಲಿತ ಪರಿಶೀಲನೆಯ ಮೂಲಕ ಅಭ್ಯರ್ಥಿಗಳ ಮೌಲ್ಯಮಾಪನ ನಡೆಸಲಾಗಿದ್ದು, ದೆಹಲಿ-ಎನ್ಸಿಆರ್, ಪುಣೆ ಹಾಗೂ ಸಂಬಲ್ಪುರದಲ್ಲಿ ಹಲವು ಹಂತಗಳ ಆಯ್ಕೆ ಪ್ರಕ್ರಿಯೆ ನಡೆದಿತ್ತು.
ಅಂತಿಮವಾಗಿ 16 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಆಗಸ್ಟ್ 11 ಮತ್ತು 12ರಂದು ಅಯೋಧ್ಯೆಯಲ್ಲಿ ಮುಖಾಮುಖಿ ಸಂವಾದಕ್ಕೆ ಆಹ್ವಾನಿಸಲಾಗಿತ್ತು. ಆಗಸ್ಟ್ 11ರಂದು ನಡೆದ ಪ್ರಕ್ರಿಯೆಯ ಮೊದಲಾರ್ಧದಲ್ಲಿ ಜಿತೇಂದ್ರ ಮಿಶ್ರಾ ಭಾಗವಹಿಸಿದ್ದರು ಎಂದು ಟ್ರಸ್ಟ್ ತಿಳಿಸಿದೆ.
ನಂತರ ಆಯ್ಕೆ ಸಮಿತಿಯು ಜಿತೇಂದ್ರ ಮಿಶ್ರಾ, ಸಂಜಯ್ ಪ್ರತಾಪ್ಸಿಂಹ್ ವಿಶ್ವಾಸ್ ರಾವ್ ಹಾಗೂ ಶ್ರುತಿ ಭಾರದ್ವಾಜ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಈ ಪೈಕಿ ಮಿಶ್ರಾ ಅವರು ಮೊದಲ ಆಯ್ಕೆಯಾಗಿ ಹೊರಹೊಮ್ಮಿ ರಾಮಮಂದಿರ ಸಂಕೀರ್ಣದ ಮೊದಲ ಸಿಇಒ ಆಗಿ ನೇಮಕಗೊಂಡಿದ್ದಾರೆ ಎಂದು ಸ್ವಾಮಿ ಗೋವಿಂದದೇವ್ ಗಿರಿ ತಿಳಿಸಿದ್ದಾರೆ.
ಆಯ್ಕೆ ಪ್ರಕ್ರಿಯೆಯ ಪ್ರತಿಯೊಂದು ಹಂತವನ್ನೂ ದಾಖಲಿಸಲಾಗಿದ್ದು, ಅಂತಿಮ ಅಭ್ಯರ್ಥಿಗಳ ವಿವರಗಳನ್ನು ಅಯೋಧ್ಯೆಯಲ್ಲಿ ದಾಖಲಿಸಲಾಗಿದೆ. ಸಂಸ್ಥೆಯ ಆಡಳಿತ ಹಾಗೂ ಪಾರದರ್ಶಕತೆ ಮಾನದಂಡಗಳಿಗೆ ಅನುಗುಣವಾಗಿಯೇ ಆಯ್ಕೆ ಪ್ರಕ್ರಿಯೆ ನಡೆದಿದೆ ಎಂದು ಟ್ರಸ್ಟ್ ಸ್ಪಷ್ಟಪಡಿಸಿದೆ.