Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

‘ಮತದಾರರ ಪಟ್ಟಿಯಿಂದ 1.07 ಕೋಟಿ ಹೆಸರುಗಳ ತೆರವು ಕುರಿತು ಪಾರದರ್ಶಕತೆ ಅಗತ್ಯ’ SIR ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ನಾಯಕರ ಅಸಮಾಧಾನ 

By Anu News
September 16, 2026 2 Min Read
0

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಕಾಂಗ್ರೆಸ್ ಗಂಭೀರವಾಗಿ ಗಮನಹರಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದರು.

ಬುಧವಾರ ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ‘ಸಂಘಟನ್ ಸೃಜನ್ ಅಭಿಯಾನ’ದಡಿ ನೂತನವಾಗಿ ನೇಮಕಗೊಂಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೊಂದಿಗೆ ಸಭೆ ನಡೆಸಿ ಸಂಘಟನೆ ಬಲಪಡಿಸುವ ಕುರಿತು ಚರ್ಚಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಬಿಎಲ್‌ಎ-2ರಿಂದ ಪಿಸಿಸಿ ಅಧ್ಯಕ್ಷರವರೆಗೆ 15,56,054 ಪದಾಧಿಕಾರಿಗಳನ್ನು ಹೊಂದಿರುವ ಸಂಘಟನಾ ವ್ಯವಸ್ಥೆ ರೂಪಿಸಲಾಗಿದೆ. ಪಕ್ಷದ ಪ್ರತಿಯೊಂದು ಹುದ್ದೆಯೂ ಜವಾಬ್ದಾರಿಯನ್ನೂ ಹೊಂದಿರಬೇಕು. ಜಿಲ್ಲಾ ಅಧ್ಯಕ್ಷರ ಕಾರ್ಯವೈಖರಿಯನ್ನು ಆರು ತಿಂಗಳ ಬಳಿಕ ಪರಿಶೀಲಿಸಲಾಗುವುದು. ಉತ್ತಮವಾಗಿ ಕಾರ್ಯನಿರ್ವಹಿಸುವವರನ್ನು ಮುಂದುವರಿಸಲಾಗುವುದು, ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದವರ ಬದಲಿಗೆ ಬೇರೆಯವರಿಗೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

SIR ಬಗ್ಗೆ ಕಾಂಗ್ರೆಸ್ ಆಕ್ಷೇಪ

ಕರ್ನಾಟಕದ SIR ಪ್ರಕ್ರಿಯೆ ಕುರಿತು ಸಭೆ ನಡೆಸಲಾಗಿದ್ದು, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಪ್ರಕ್ರಿಯೆ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿರಬೇಕು ಎಂದು ವೇಣುಗೋಪಾಲ್ ಆಗ್ರಹಿಸಿದರು.

ಕರ್ನಾಟಕದಲ್ಲಿ SIR ಆರಂಭಕ್ಕೂ ಮುನ್ನ ಸುಮಾರು 5.54 ಕೋಟಿ ಮತದಾರರಿದ್ದರೆ, ಕರಡು ಪಟ್ಟಿಯಲ್ಲಿ 1,07,96,415 ಮಂದಿಯನ್ನು ASDDO (Absent, Shifted, Dead, Duplicate and Others) ವರ್ಗದಲ್ಲಿ ಗುರುತಿಸಲಾಗಿದೆ. ಅಲ್ಲದೆ, ಸುಮಾರು 43.81 ಲಕ್ಷ ಮತದಾರರಿಗೆ ‘ನೋ ಮ್ಯಾಪಿಂಗ್’ ಹಾಗೂ ‘ಅನಾಮಲಿ’ ವಿಭಾಗಗಳಡಿ ನೋಟಿಸ್ ನೀಡುವ ಪ್ರಕ್ರಿಯೆ ನಡೆದಿದೆ.

ಈ ಅಂಕಿಅಂಶಗಳನ್ನು ಉಲ್ಲೇಖಿಸಿದ ವೇಣುಗೋಪಾಲ್, ಹೆಸರುಗಳ ತೆರವು ನಿಜವಾದ ಕಾರಣಗಳಿಂದಾಗಿದ್ದರೆ ಕಾಂಗ್ರೆಸ್‌ಗೆ ಆಕ್ಷೇಪವಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ವಿರೋಧ ಪಕ್ಷಗಳು ಹಲವು ಪ್ರಶ್ನೆಗಳನ್ನು ಎತ್ತುತ್ತಿದ್ದು, ಅವುಗಳಿಗೆ ಸಮರ್ಪಕ ಉತ್ತರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ಚುನಾವಣೆಯನ್ನು ಜನಾದೇಶದ ಮೂಲಕ ಗೆಲ್ಲಬೇಕೇ ಹೊರತು ಮತಗಳ್ಳತನದ ಮೂಲಕ ಅಲ್ಲ. ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮವನ್ನು ರಾಜ್ಯ ಅಥವಾ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಹೇಳಿದರು.

‘ಜಿಲ್ಲಾ ಮಟ್ಟದಲ್ಲಿ ನಿಗಾ’

SIR ಪ್ರಕ್ರಿಯೆ ಜಿಲ್ಲಾ ಮಟ್ಟದಲ್ಲಿ ಹೇಗೆ ನಡೆಯುತ್ತಿದೆ ಎಂಬುದನ್ನು ಹಿರಿಯ ನಾಯಕರು ಹಾಗೂ ಸಚಿವರೊಂದಿಗೆ ಚರ್ಚಿಸಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಸೂಚಿಸಲಾಗುವುದು ಎಂದು ವೇಣುಗೋಪಾಲ್ ತಿಳಿಸಿದರು.

ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ದೇಶದಾದ್ಯಂತ ನಡೆಯುತ್ತಿರುವ SIR ಪ್ರಕ್ರಿಯೆಯ ಮೇಲೂ ಕಾಂಗ್ರೆಸ್ ನಿಗಾ ಇರಿಸಿದೆ. ಎಲ್ಲ ರಾಜ್ಯಗಳ ಪಿಸಿಸಿಗಳೊಂದಿಗೆ ಸಂಪರ್ಕದಲ್ಲಿದ್ದು, ರಾಜಸ್ಥಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಈ ಕುರಿತು ಕೆಲಸ ಮಾಡಲಾಗುತ್ತಿದೆ ಎಂದರು.

‘ಆಯೋಗದ ಮೇಲೆ ವಿಶ್ವಾಸ ಕಡಿಮೆಯಾಗಿದೆ’

ಅರ್ಹ ಮತದಾರರ ಹೆಸರುಗಳನ್ನು ರಕ್ಷಿಸುವ ಕುರಿತು ಕಾಂಗ್ರೆಸ್ ಸಲ್ಲಿಸಿರುವ ಮನವಿಗಳಿಗೆ ಚುನಾವಣಾ ಆಯೋಗ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ವೇಣುಗೋಪಾಲ್ ಆರೋಪಿಸಿದರು.

ಉತ್ತರಾಖಂಡದಲ್ಲಿನ SIR ಪ್ರಕ್ರಿಯೆಯ ಸಂದರ್ಭದಲ್ಲಿಯೂ ಮತದಾರರ ಹೆಸರುಗಳ ಪರಿಷ್ಕರಣೆ ಕುರಿತು ಪ್ರಶ್ನೆಗಳು ಎದುರಾಗಿದ್ದವು. ಅರ್ಹ ದೂರುಗಳನ್ನು ಚುನಾವಣಾ ಆಯೋಗ ಆಲಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ದೂರುಗಳನ್ನು ತಿರಸ್ಕರಿಸಲಾಗುತ್ತಿದೆ ಎಂದು ಅವರು ದೂರಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 18 ಬಾರಿ ವಿವಿಧ ಮನವಿಗಳನ್ನು ಸಲ್ಲಿಸಿದ್ದರೂ ಆಯೋಗ ಸ್ಪಂದಿಸಿಲ್ಲ ಎಂದು ಆರೋಪಿಸಿದ ಅವರು, ಇದು ಉದ್ದೇಶಪೂರ್ವಕ ನಡೆಯಾಗಿದೆ ಎಂದು ಟೀಕಿಸಿದರು.

ಮೋದಿ ವಿರುದ್ಧ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ವಿಶ್ವದ ಅತ್ಯಂತ ಪ್ರಜಾಸತ್ತಾತ್ಮಕ ವ್ಯಕ್ತಿ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿರುವ ಕುರಿತು ಪ್ರತಿಕ್ರಿಯಿಸಿದ ವೇಣುಗೋಪಾಲ್, ಇದು ದೇಶದ ದೊಡ್ಡ ಜೋಕ್ ಎಂದು ಟೀಕಿಸಿದರು.

ಕೇಂದ್ರ ಸರ್ಕಾರದ ನೀತಿಗಳ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಯುಪಿಐ ವಹಿವಾಟಿನ ಮೇಲೆ ತೆರಿಗೆ ವಿಧಿಸುವ ಪ್ರಸ್ತಾಪವಿದೆ ಎಂದು ಆರೋಪಿಸಿ, ಇದರಿಂದ ಜನಸಾಮಾನ್ಯರ ಮೇಲೆ ಮತ್ತಷ್ಟು ಹೊರೆ ಬೀಳಲಿದೆ ಎಂದು ಹೇಳಿದರು.

‘ವಂದೇ ಮಾತರಂ’ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ಪಕ್ಷದ ಎಲ್ಲರೂ ಬದ್ಧರಾಗಿದ್ದಾರೆ ಎಂದು ತಿಳಿಸಿದರು.

Author

Anu News

Follow Me
Other Articles
Previous

If Hindutva weakens, nation weakens, says CT Ravi; calls for caste-free Ganeshotsav

Next

Congress keeping close watch on Karnataka SIR process, says KC Venugopal

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Congress keeping close watch on Karnataka SIR process, says KC Venugopal
    • ‘ಮತದಾರರ ಪಟ್ಟಿಯಿಂದ 1.07 ಕೋಟಿ ಹೆಸರುಗಳ ತೆರವು ಕುರಿತು ಪಾರದರ್ಶಕತೆ ಅಗತ್ಯ’ SIR ಪ್ರಕ್ರಿಯೆ ಬಗ್ಗೆ ಕಾಂಗ್ರೆಸ್ ನಾಯಕರ ಅಸಮಾಧಾನ 
    • If Hindutva weakens, nation weakens, says CT Ravi; calls for caste-free Ganeshotsav
    • ಹಿಂದುತ್ವ ದುರ್ಬಲವಾದರೆ ರಾಷ್ಟ್ರ ದುರ್ಬಲ; ಗಣೇಶೋತ್ಸವದಲ್ಲಿ ಜಾತೀಯತೆ, ಅಸ್ಪೃಶ್ಯತೆಗೆ ಅವಕಾಶ ಇರಬಾರದು: ಸಿ.ಟಿ.ರವಿ
    • Bengaluru gets 45-acre urban forest at Panathur; more large parks planned: Minister Ramalinga Reddy
    Copyright 2026 — ANU News. All rights reserved. Blogsy WordPress Theme