Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ಜೆಡಿಎಸ್ ನಿಂದ ಡಮ್ಮಿ ಅಭ್ಯರ್ಥಿ; ಜೆಡಿಎಸ್ ನಾಯಕರ ನೈತಿಕತೆ ಪ್ರಶ್ನಿಸಿದ ಚಲುವರಾಯಸ್ವಾಮಿ

By Anu News
June 16, 2026 2 Min Read
0

ಬೆಂಗಳೂರು: ರಸಗೊಬ್ಬರ ಅಭಾವ ಹಾಗೂ ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ವಿರೋಧ ಪಕ್ಷಗಳು ದ್ವಂದ್ವ ರಾಜಕಾರಣ ಮಾಡುತ್ತಿವೆ. ಅದರಲ್ಲೂ ಜೆಡಿಎಸ್ ಅವಧಿಯಲ್ಲಿ ನಡೆದ ಟಿಕೆಟ್ ಫಿಕ್ಸಿಂಗ್ ಹಾಗೂ ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಮಾಜಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮೈಶುಗರ್ ಅಧ್ಯಕ್ಷರಾದ ಸಿ.ಡಿ. ಗಂಗಾಧರ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ನಿಲುವುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

“ಕಳೆದ ಎರಡು ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಸಾವಯವ ಗೊಬ್ಬರ ಬಳಕೆಗೆ ಒತ್ತು ನೀಡಿದಾಗ, ‘ಬರೀ ಸಾವಯವದಿಂದ ರೈತ ಬದುಕಲು ಸಾಧ್ಯವಿಲ್ಲ’ ಎಂದು ಇದೇ ವಿರೋಧ ಪಕ್ಷಗಳು ಟೀಕೆ ಮಾಡಿದ್ದವು. ಆದರೆ, ಈಗ ಪ್ರಧಾನಿ ನರೇಂದ್ರ ಮೋದಿಯವರೇ ಸಾವಯವ ಗೊಬ್ಬರ ಬಳಸಿ ಎಂದು ಹೇಳುತ್ತಿದ್ದಾರೆ. ಈಗ ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ಅವರು ಏನು ಹೇಳುತ್ತಾರೆ? ಕೇಂದ್ರ ಸರ್ಕಾರವನ್ನು ಟೀಕಿಸುತ್ತಾರೋ ಅಥವಾ ಹೊಗಳುತ್ತಾರೋ ಕಾದು ನೋಡಬೇಕಿದೆ” ಎಂದು ಚಲುವರಾಯಸ್ವಾಮಿ ಪ್ರಶ್ನಿಸಿದರು.

“ನಾನು ಕೃಷಿ ಸಚಿವನಾಗಿದ್ದಾಗಲೇ ಜಿಲ್ಲಾಧಿಕಾರಿಗಳು ಹಾಗೂ ಸಿಇಒಗಳಿಗೆ ರೈತರಿಗೆ ಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಿದ್ದೆ. ಅಧಿಕಾರಿಗಳು ಈಗಲೂ ಅದನ್ನು ಪಾಲಿಸುತ್ತಿದ್ದಾರೆ. ಈಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ವಿಪಕ್ಷಗಳು ಇದನ್ನು ದೊಡ್ಡದಾಗಿ ಬಿಂಬಿಸಿ ರೈತರಲ್ಲಿ ಆತಂಕ ಸೃಷ್ಟಿಸುವುದು ಬೇಡ” ಎಂದು ಮನವಿ ಮಾಡಿದರು.

ವಿರೋಧ ಪಕ್ಷದ ನಾಯಕತ್ವ ಉಳಿಸಿಕೊಳ್ಳಲು ಆರ್. ಅಶೋಕ್ ಹೋರಾಟ,
ಯಾವುದೇ ಹೊಸ ಸರ್ಕಾರ ಅಧಿಕಾರಕ್ಕೆ ಬಂದಾಗ ಕನಿಷ್ಠ 2 ರಿಂದ 3 ತಿಂಗಳು ಸಮಯ ಕೊಟ್ಟು, ನಂತರ ಟೀಕೆ ಟಿಪ್ಪಣಿ ಮಾಡುವ ರಾಜಕೀಯ ಸಂಸ್ಕಾರವಿರಬೇಕು. ಡಿ.ಕೆ. ಶಿವಕುಮಾರ್ ಅವರಿಗೆ ಆಡಳಿತದ ಅನುಭವ ಇಲ್ಲ ಎಂದೇನೂ ಇಲ್ಲ, ಅವರು ಈ ಹಿಂದೆ ಸಿದ್ದರಾಮಯ್ಯ ಅವರ ಜೊತೆ ಡಿಸಿಎಂ ಆಗಿ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿ, ಅಶೋಕ್ ಎಲ್ಲರೂ ಐದಾರು ತಿಂಗಳು ಸರ್ಕಾರಕ್ಕೆ ಸಮಯ ಕೊಡುತ್ತೇವೆ ಎಂದು ಹೇಳಿದ್ದರೆ ರಾಜಕಾರಣದಲ್ಲಿ ಒಂದು ಒಳ್ಳೆಯ ಭಾವನೆ ಬರುತ್ತಿತ್ತು.

ಆದರೆ, ಡಿ.ಕೆ. ಶಿವಕುಮಾರ್ ಅವರು ಪದಗ್ರಹಣ ಮಾಡಿದ ದಿನದಿಂದಲೇ ಆರ್. ಅಶೋಕ್ ಅವರು ನಾಲಿಗೆ ಹರಿಬಿಡುತ್ತಿದ್ದಾರೆ. ತಮ್ಮ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಉಳಿಸಿಕೊಳ್ಳಲು ಅವರು ದಿನನಿತ್ಯ ಇಂತಹ ಪ್ರದರ್ಶನ ನೀಡುತ್ತಿದ್ದಾರೆ. ಅಶೋಕ್ ಅವರು ತಮ್ಮ ಭಾಷೆಯ ಮೇಲೆ ಹಿಡಿತ ಸಾಧಿಸಿ ಮಾತನಾಡಿದರೆ ಒಳ್ಳೆಯದು ಎಂದು ಎಚ್ಚರಿಸಿದರು.

ದೇವೆಗೌಡರು- ಎಸ್.ಎಂ.ಕೃಷ್ಣ ನಮ್ಮ ಸಮಾಜದ ಮುತ್ಸದ್ದಿಗಳು,
ಹೆಚ್.ಡಿ. ದೇವೇಗೌಡರು ಹಾಗೂ ಎಸ್.ಎಂ. ಕೃಷ್ಣ ಅವರು ನಮ್ಮ ಸಮಾಜದ ಹಿರಿಯ ಮುತ್ಸದ್ದಿಗಳಾಗಿದ್ದು, ಅವರನ್ನು ನಾವು ಗೌರವಿಸಬೇಕು ಎಂದು ಡಿ.ಕೆ. ಶಿವಕುಮಾರ್ ಅವರೇ ಖಾಸಗಿ ಮಾತುಕತೆಯ ವೇಳೆ ಹೇಳಿದ್ದರು. ದೇವೇಗೌಡರ ಮನೆಗೆ ಹೋಗಿ ಆಶೀರ್ವಾದ ಪಡೆದಿರುವುದು ಡಿಕೆಶಿ ಅವರ ಸಂಸ್ಕಾರವನ್ನು ತೋರಿಸುತ್ತದೆ. ಅಶೋಕ್ ಮತ್ತು ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಕನಿಷ್ಠ ಗೌರವ ಕೊಡಲು ಕಲಿಯಬೇಕು ಎಂದರು.

Author

Anu News

Follow Me
Other Articles
Previous

ಬಿಡದಿ ಟೌನ್‌ಶಿಪ್ ವಿವಾದದಲ್ಲಿ ಮೋದಿ ಹೆಸರು ಬಳಸಬೇಡಿ; ಡಿಕೆಶಿಗೆ ತೇಜಸ್ವಿ ಸೂರ್ಯ ತರಾಟೆ

Next

ಆಸ್ತಿ ತನಿಖೆಗೆ ಒಳಪಡಿಸಿಕೊಳ್ಳಿ: ಹೆಚ್‌ಡಿಕೆಗೆ ಚಲುವರಾಯಸ್ವಾಮಿ ಸವಾಲು,

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • UPSC IFS ಪ್ರಿಲಿಮ್ಸ್ 2026 ಫಲಿತಾಂಶ ಪ್ರಕಟ: 1,046 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹ
    • ಡಿಆರ್‌ಡಿಒ ಸಾಧನೆ: ದೇಶೀಯ ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ
    • UPSC ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆ ಫಲಿತಾಂಶ ಪ್ರಕಟ: 13,343 ಅಭ್ಯರ್ಥಿಗಳು ಮುಖ್ಯ ಪರೀಕ್ಷೆಗೆ ಅರ್ಹ
    • ಭಾರತ-ಸ್ಲೋವಾಕಿಯಾ ಸಂಬಂಧಕ್ಕೆ ಹೊಸ ಬಲ: ಸಮಗ್ರ ಪಾಲುದಾರಿಕೆಗೆ ಏರಿಕೆ
    • ದಂಬುಲಾದಲ್ಲಿ ಹೈಡ್ರಾಮಾ: ಸೋಲಿನ ಬೆನ್ನಲ್ಲೇ ವೈಭವ್ ಸೂರ್ಯವಂಶಿ-ಲಂಕಾ ಆಟಗಾರ ನಡುವೆ ವಾಗ್ವಾದ
    Copyright 2026 — ANU News. All rights reserved. Blogsy WordPress Theme