ಆಸ್ತಿ ತನಿಖೆಗೆ ಒಳಪಡಿಸಿಕೊಳ್ಳಿ: ಹೆಚ್ಡಿಕೆಗೆ ಚಲುವರಾಯಸ್ವಾಮಿ ಸವಾಲು,
ಬೆಂಗಳೂರು: ‘ನಿಮ್ಮ ಇಡೀ ಕುಟುಂಬದ ಆಸ್ತಿಯನ್ನು ಘೋಷಣೆ ಮಾಡಲು ನೀವು ಸಿದ್ಧರಿದ್ದೀರಾ? ನಿಮ್ಮ ಕುಟುಂಬದಲ್ಲಿ ಎಷ್ಟು ಆಸ್ತಿ ಇದೆ, ಅದು ಎಲ್ಲಿಂದ ಬಂತು ಎಂದು ಸ್ವಯಂ ತನಿಖೆಗೆ ಒಳಪಡಿಸಿಕೊಳ್ಳಿ’ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿಗೆ ಕಾಂಗ್ರೆಸ್ ನಾಯಕ ಚಲುವರಾಯಸ್ವಾಮಿ ಸವಾಲು ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ ಹಾಗೂ ಮೈಶುಗರ್ ಅಧ್ಯಕ್ಷರಾದ ಸಿ.ಡಿ. ಗಂಗಾಧರ್ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲುವರಾಯಸ್ವಾಮಿ ಅವರು, ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ನಿಲುವುಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಡಿ.ಕೆ. ಶಿವಕುಮಾರ್ ಅವರಿಗೆ 1,400 ಕೋಟಿ ರೂ. ಎಲ್ಲಿಂದ ಉದುರಿತು?” ಎಂದು ಕೇಳುತ್ತಿರುವ ಕುಮಾರಸ್ವಾಮಿ ಅವರಿಗೆ ಚಲುವರಾಯಸ್ವಾಮಿ ತಿರುಗೇಟು ನೀಡಿದರು. “ಡಿ.ಕೆ. ಶಿವಕುಮಾರ್ ಅವರು ಮೊದಲಿನಿಂದಲೂ ಬ್ಯುಸಿನೆಸ್ಮೆನ್, ಅವರಿಗೆ ರಾಜಕಾರಣ ಒಂದು ಪ್ಯಾಶನ್ ಅಷ್ಟೇ. ಆದರೆ, ಹೆಚ್.ಡಿ. ದೇವೇಗೌಡರನ್ನು ಹೊರತುಪಡಿಸಿ ನಿಮ್ಮ ಇಡೀ ಕುಟುಂಬದ ಆಸ್ತಿಯನ್ನು ಘೋಷಣೆ ಮಾಡಲು ನೀವು ಸಿದ್ಧರಿದ್ದೀರಾ? ನಿಮ್ಮ ಕುಟುಂಬದಲ್ಲಿ ಎಷ್ಟು ಆಸ್ತಿ ಇದೆ, ಅದು ಎಲ್ಲಿಂದ ಬಂತು ಎಂದು ಸ್ವಯಂ ತನಿಖೆಗೆ ಒಳಪಡಿಸಿಕೊಳ್ಳಿ” ಎಂದು ಸವಾಲು ಹಾಕಿದರು.

“ನೀವು ಇದೇ ರೀತಿ ಮುಂದುವರಿದರೆ ನಿಮ್ಮ ಇಡೀ ಜಾತಕದ ದಾಖಲೆಗಳು ಡಿ.ಕೆ. ಶಿವಕುಮಾರ್ ಅವರ ಬಳಿ ಇವೆ. ಅವರು ಕೂಟ ರಾಜಕಾರಣದಲ್ಲಿ ಚಾಣಾಕ್ಯರಾಗಿದ್ದು, ಸೂಕ್ತ ಸಮಯ ಬಂದಾಗ ಎಲ್ಲಾ ದಾಖಲೆಗಳನ್ನು ಹೊರಹಾಕಲಿದ್ದಾರೆ. ಬರೀ ಮಾತನಾಡಿಯೇ ರಾಜಕಾರಣದಲ್ಲಿ ಸಕ್ಸಸ್ ಆಗ್ತೀನಿ ಅಂದುಕೊಂಡಿದ್ದರೆ ಅದು ತಪ್ಪು, ಒಂದಲ್ಲಾ ಒಂದು ದಿನ ಇದು ಮುಕ್ತಾಯವಾಗುತ್ತದೆ. ನಿಮ್ಮ ವಿರುದ್ಧ ಹೋರಾಡುವ ಶಕ್ತಿ ಡಿಕೆಶಿಗೆ ಇಲ್ಲ ಅಂದುಕೊಳ್ಳಬೇಡಿ, ನೀವು ಏನೇನೂ ಅಲ್ಲದ ಅವಧಿಯಲ್ಲೂ ಅವರು ದೇವೇಗೌಡರನ್ನೇ ಫೇಸ್ ಮಾಡಿದವರು” ಎಂದರು.
ನೆರೆ ರಾಜ್ಯಗಳ ಉದಾಹರಣೆ ನೀಡಿದ ಚಲುವರಾಯಸ್ವಾಮಿ, “ತಮಿಳುನಾಡಿನ ಸ್ಟಾಲಿನ್ ಆಗಲಿ, ಆಂಧ್ರದ ಜಗನ್ಮೋಹನ್ ರೆಡ್ಡಿ ಆಗಲಿ ತಮ್ಮ ತಂದೆ ಇಲ್ಲದಿದ್ದರೂ ಸ್ವಂತ ಶಕ್ತಿಯಿಂದ ಹೋರಾಟ ಮಾಡಿ ಸಿಎಂ ಆಗಿದ್ದಾರೆ. ನಿಮ್ಮ ತಂದೆಯವರಾದ ದೇವೇಗೌಡರ ಹೆಸರಿಲ್ಲದೆ ನೀವು ಗೆದ್ದು ಬರ್ತೀನಿ ಅನ್ನೋ ಆತ್ಮವಿಶ್ವಾಸ ನಿಮಗಿದೆಯೇ? ‘ಕಳೆದ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲದಿದ್ದರೆ ಪಕ್ಷ ವಿಸರ್ಜನೆ ಮಾಡುತ್ತೇನೆ’ ಎಂದು ಹೇಳಿದ್ದಿರಿ, ವಿಸರ್ಜನೆ ಮಾಡಿದ್ರಾ?” ಎಂದು ಹೆಚ್ಡಿಕೆಯನ್ನು ಪ್ರಶ್ನಿಸಿದರು.
ಬಿಡದಿ ಟೌನ್ಶಿಪ್:
ರೈತರ ವಿಶ್ವಾಸ ಮುಖ್ಯಬಿಡದಿ ಟೌನ್ಶಿಪ್ ಯೋಜನೆಗೆ ರೈತರ ವಿರೋಧವಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಈ ಯೋಜನೆಯನ್ನು ಆರಂಭಿಸಿದ್ದೇ ಕುಮಾರಸ್ವಾಮಿ ಅವರು. ಅದನ್ನು ಈಗ ನಾವು ಮುಂದುವರಿಸುತ್ತಿದ್ದರೆ ಅವರೇ ವಿರೋಧಿಸುತ್ತಿದ್ದಾರೆ. ರೈತರನ್ನು ಒಕ್ಕಲೆಬ್ಬಿಸುವುದು ನಮ್ಮ ಸರ್ಕಾರದ ಉದ್ದೇಶವಲ್ಲ. ನಾಲ್ಕು ದಿನ ತಡವಾದರೂ ಪರವಾಗಿಲ್ಲ, ರೈತರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಯೋಜನೆಯನ್ನು ಮುಂದುವರಿಸುತ್ತೇವೆ. ನೋಟಿಫಿಕೇಶನ್ ಹೊರಡಿಸಿದ ತಕ್ಷಣ ಎಲ್ಲವೂ ಮುಗಿಯಿತು ಎಂದಲ್ಲ. ಸಿಎಂ ಶಿವಕುಮಾರ್ ಅವರು ಅದೇ ಜಿಲ್ಲೆಯವರಾಗಿದ್ದರಿಂದ ರೈತರನ್ನು ವಿಶ್ವಾಸಕ್ಕೆ ಪಡೆದೇ ಯೋಜನೆ ಕೈಗೆತ್ತಿಕೊಳ್ಳುತ್ತಾರೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಲಾಗುವುದು. ಮುಂದೆ ಈ ಯೋಜನೆಯನ್ನು ಮಂಡ್ಯ ಹಾಗೂ ಮೈಸೂರುವರೆಗೂ ಕೊಂಡೊಯ್ಯುವ ಆಲೋಚನೆ ಇದೆ” ಎಂದು ಸ್ಪಷ್ಟಪಡಿಸಿದರು.